ನವದೆಹಲಿ: ಲಾಕ್ಡೌನ್ ಕಾರಣದಿಂದಾಗಿ ದೇಶದ ಬಹುತೇಕ ಕೈಗಾರಿಕೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ತತ್ತರಿಸಿವೆ. ವರ್ಕ್ ಫ್ರಾಮ್ ಹೋಮ್ಗೆ ಅವಕಾಶ ಮಾಡಿಕೊಟ್ಟ ಐಟಿ ದಿಗ್ಗಜ ಕಂಪನಿಗಳು ಕೂಡ ನಷ್ಟದಲ್ಲಿವೆ. ಹೀಗಾಗಿ ಬಹುತೇಕ ಎಲ್ಲ ಕಂಪನಿಗಳು ಸಂಬಳ ಕಡಿತ ಘೋಷಿಸಿವೆ. ಹೆಚ್ಚಿನ ಸಂಸ್ಥೆಗಳಲ್ಲಿ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಕಂಪನಿಗಳಿಗೆ ಅನುಮಕೂಲವಾಗಲಿ ಎಂಬ ಕಾರಣಕ್ಕೆ ಕಾರ್ಮಿಕ ಕಾನೂನುಗಳಿಂದಲೂ ವಿನಾಯ್ತಿ ನೀಡಲಾಗಿದೆ.
ದೇಶದ ಎಲ್ಲ ಉದ್ಯಮಗಳ ಪರಿಸ್ಥಿತಿ ಹೀಗಿರುವಾಗ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಸಂಸ್ಥೆಯೊಂದು ಸಿಬ್ಬಂದಿ ಸಂಬಳ ಕಡಿತ ಮಾಡಲ್ಲ ಎಂದು ಘೋಷಿಸಿದೆ. ಜತೆಗೆ ಈ ಹಿಂದೆ ಭರವಸೆ ನೀಡಿದಂತೆ ಬೋನಸ್ ಕೂಡ ನೀಡಲಾಗುವುದು ಎಂದು ಘೋಷಿಸಿದೆ. ಪ್ರಸ್ತುತ ಈ ಸಂಸ್ಥೆಯ ಉದ್ಯೋಗಿಗಳೇ ಧನ್ಯರು ಎನ್ನಬಹುದೇನೋ?
ಇದನ್ನೂ ಓದಿ; ಅಂತರ ಜಿಲ್ಲಾ ಸಂಚಾರಕ್ಕೆ ಬೇಕಿಲ್ಲ ಪಾಸ್; ಬಸ್, ರೈಲು, ವಿಮಾನ ಪ್ರಯಾಣಕ್ಕೆ ಈ ನಿಯಮ ಪಾಲನೆ ಕಡ್ಡಾಯ
ಎಚ್ಸಿಎಲ್ ಟೆಕ್ನಾಲಜೀಸ್ ದೇಶದ 3ನೇ ಅತಿ ದೊಡ್ಡ ಐಟಿ ಕಂಪನಿಯಾಗಿದೆ. ಎಲ್ಲ 1,50,000 ಉದ್ಯೋಗಿಗಳ ಸಂಬಳ ಕಡಿತ ಮಾಡುವುದಿಲ್ಲ ಎಂದು ಸಂಸ್ಥೆಯು ತಿಳಿಸಿದೆ. ಜತೆಗೆ, ಕಳೆದ ವರ್ಷದ ಅವಧಿಗೆ ನೀಡಬೇಕಾದ ಬೋನಸ್ ಕೂಡ ನೀಡಲಾಗುವುದು ಎಂದು ಹೇಳಿದೆ. ಕರೊನಾ ಸಂಕಷ್ಟದ ಅವಧಿಯಲ್ಲಿ ಆದಾಯದಲ್ಲಿ ಇಳಿಕೆಯಾಗಿದ್ದರೂ ಕಂಪನಿ ಈ ಕ್ರಮ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.
ನೊಯ್ಡಾದಲ್ಲಿ ಮುಖ್ಯ ಕಚೇರಿ ಹೊಂದಿರುವ ಕಂಪನಿ, ವರ್ಷಾರಂಭದಲ್ಲಿ 15,000 ಹೊಸಬರಿಗೆ ನೀಡಲಾಗಿದ್ದ ಉದ್ಯೋಗಾವಕಾಶದ ಭರವಸೆಯನ್ನೂ ಈಡೇರಿಸುವುದಾಗಿ ಹೇಳಿ ಬದ್ಧತೆ ಮೆರೆದಿದೆ.
ಕಂಪನಿಯ ಯಾವುದೇ ಯೋಜನೆಗಳು ರದ್ದಾಗಿಲ್ಲ. ಆದರೆ, ಈಗಾಗಲೇ ಶುರುವಾಗಬೇಕಿದ್ದ ಯೋಜನೆಗಳು ವಿಳಂಬವಾಗಿವೆ. ನಮಗೆ 5000ಕ್ಕೂ ಆಧಿಕ ಉದ್ಯೋಗಿಗಳು ಬೇಕಾಗಿದ್ದಾರೆ. ಅವರ ನೇಮಕಾತಿಯನ್ನು ಮಾಡಿಕೊಳ್ಳಲಿದ್ದೇವೆ ಎಂದು ಎಚ್ಸಿಎಲ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ವಿ.ವಿ. ಅಪ್ಪಾರಾವ್ ತಿಳಿಸಿದ್ದಾರೆ.
ಇದನ್ನೂ ಓದಿ; ನರ್ಸರಿ ಮಕ್ಕಳ ಗತಿಯೇನು? ಶಾಲಾರಂಭ ವಿಳಂಬವಾದರೂ ಪೂರ್ತಿ ಶುಲ್ಕ ನೀಡಬೇಕೇ?
ಜುಲೈನಲ್ಲಿ ವಾರ್ಷಿಕ ವೇತನ ಹೆಚ್ಚಳ ಪ್ರಕ್ರಿಯೆ ನಡೆಯಬೇಕಿದೆ. ಆ ಸಮಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಸಾರಿಗೆ ಹಾಗೂ ಉತ್ಪಾದನಾ ವಲಯದಲ್ಲಿ ಸಂಕಷ್ಟ ಎದುರಾಗಿದೆ.
ಐಟಿ ದಿಗ್ಗಜ ಕಂಪನಿಗಳಾದ ಇನ್ಫೊಸಿಸ್, ವಿಪ್ರೋ, ಟಿಸಿಎಸ್ ಮೊದಲಾದ ಕಂಪನಿಗಳು ವೇತನ ಹೆಚ್ಚಳ ತಡೆಹಿಡಿದಿವೆ. ಬಡ್ತಿಯನ್ನು ಸ್ಥಗಿತಗೊಳಿಸಿವೆ. ಈ ಕಂಪನಿಗಳಲ್ಲಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಬಂದ್ ಆಗಿದೆ.
ಬೇಬಿ ಪೌಡರ್ನಿಂದ ಕ್ಯಾನ್ಸರ್ ವಿವಾದ; ಅಮೆರಿಕ, ಕೆನಡಾದಲ್ಲಿ ಮಾರಾಟ ನಿಲ್ಲಿಸಿದ ಜಾನ್ಸನ್ ಆ್ಯಂಡ್ ಜಾನ್ಸನ್