ಅಥಣಿ ಗ್ರಾಮೀಣ: ದೇವದಾಸಿ ಪದ್ಧತಿ, ಅರೆಬೆತ್ತಲೆ ಸೇವೆ ಮಾಡುವುದು, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಭಿಕ್ಷೆ ಬೇಡುವುದು ಮಹಾ ಅಪರಾಧ. ಇಂತಹ ಘಟನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದಲ್ಲದೆ, ದಂಡ ಸಹ ವಿಧಿಸಲಾಗುವುದು ಎಂದು ತಹಸೀಲ್ದಾರ್ ವಾಣಿ ಯು. ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲದೇವಿ ಜಾತ್ರೆಯಲ್ಲಿ ರಾಜ್ಯ ಮಹಿಳಾ ಅಭಿವದ್ಧಿ ನಿಗಮ ಬೆಂಗಳೂರು, ದೇವದಾಸಿ ಪುನರ್ವಸತಿ ಯೋಜನೆ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥಣಿ ಹಾಗೂ ಕೊಕಟನೂರ ಗ್ರಾಪಂ ವತಿಯಿಂದ ಶನಿವಾರ ಆಯೋಜಿಸಿದ್ದ ದೇವದಾಸಿ ನಿರ್ಮೂಲನೆ ಕುರಿತು ಜನಜಾಗತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನಕ್ಷರತೆ, ಮೂಢನಂಬಿಕೆ, ಶೋಷಣೆ, ದೌರ್ಜನ್ಯಗಳಿಂದ ಸಮಾಜ ಮುಕ್ತವಾಗಬೇಕಿದೆ. ಮಹಿಳೆ ಮತ್ತು ಮಕ್ಕಳ ಶೋಷಣೆ, ದೌರ್ಜನ್ಯ ತಡೆಯುವುದು ನಮ್ಮ ಕರ್ತವ್ಯ. ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ 2009ರ ಪ್ರಕಾರ ಯಾವುದೇ ಹೆಣ್ಣಿಗೆ ಮುತ್ತು ಕಟ್ಟುವದು ದೇವದಾಸಿ ಮಾಡುವುದು ಅಪರಾಧವಾಗಿ. ಈ ಕೃತ್ಯಕ್ಕೆ ಪ್ರೋತ್ಸಾಹಿಸಿದವರಿಗೆ ಮತ್ತು ಭಾಗವಹಿಸಿದವರಿಗೆ ಗರಿಷ್ಠ 9 ವರ್ಷ ಕಠಿಣ ಶಿಕ್ಷೆ, ಗರಿಷ್ಠ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯೆ ಡಾ. ಸವಿತಾ ಪೂಜಾರಿ ಮಾತನಾಡಿ, ಕೊಕಟನೂರ ಯಲ್ಲಮ್ಮದೇವಿ ಜಾತ್ರೆ ದೊಡ್ಡದ್ದು, ಆದ್ದರಿಂದ ಗಲೀಜು ಮಾಡದೆ ಸಚ್ಛತೆ ಕಾಪಾಡಬೇಕು ಎಂದರು.
ಬಳಿಕ ಧುಳಗನವಾಡಿಯ ರಂಗದರ್ಶನ ಜಾಗೃತಿ ಕಲಾತಂಡದವರು ನಟನೆ ಮೂಲಕ ಜಾತ್ರಾರ್ಥಿಗಳಿಗೆ ಅರಿವು ಮೂಡಿಸಿದರು. ಗ್ರಾಪಂ ಅಧ್ಯಕ್ಷೆ ಶಾನವ್ವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಅಶೋಕ ಕಾಂಬಳೆ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ, ಪಿಡಿಒ ಸಿದ್ದಪ್ಪ ತುಂಗಳ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಡಾ. ಪ್ರವೀಣ ರಬಾಡೆ, ಮಾನಿಕಶೆಟ್ಟಿ ಎಸ್.ಜಿ., ವೀಣಾ ಅಡಹಳ್ಳಿ, ಭರತ ಕಲಾಚಂದ ಇತರರಿದ್ದರು.