ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಜಯವಾಣಿ ಮತ್ತು ದಿಗ್ವಿಜಯ 24*7 ನ್ಯೂಸ್ ಚಾನಲ್ ವತಿಯಿಂದ ಆಯೋಜನೆಗೊಂಡಿರುವ ಮಹಿಳಾ ವಾಕಥಾನ್ಗೆ ಆರೋಗ್ಯ ಸಚಿವ ಕೆ. ಸುಧಾಕರ್, ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ, ನಟಿ ಅದಿತಿ ಪ್ರಭುದೇವ್, ನಟ ನೆನಪಿರಲಿ ಪ್ರೇಮ್ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನರಸಿಂಹ ಮೂರ್ತಿ ಅವರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಇಂದು (ಮಾ.8) ಬೆಳಗ್ಗೆ ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಕೆ. ಸುಧಾಕರ್, ಮೊದಲು ಮಹಿಳಾ ದಿನಾಚರಣೆಯ ಶುಭ ಕೋರಿದರು. ಈ ನಾಡಿನಲ್ಲಿ ಮಹಿಳೆಯರ ಸಬಲೀಕರಣ ಆಗಬೇಕು. ಮಹಿಳೆಯರು ಅಭಿವೃದ್ಧಿಯಾಗುತ್ತಿದ್ದಾರೆ ಮತ್ತು ಉನ್ನತ ಶಿಕ್ಷಣದ ಕಡೆ ಹೆಚ್ಚೆಚ್ಚು ಜನ ಬರುತ್ತಿದ್ದಾರೆ ಎಂದು ಹೇಳಿದರು.
ವಿಧಾನಸೌಧದ ಮುಂಭಾಗದಿಂದ ಆರಂಭವಾಗಿರುವ ವಾಕಥಾನ್ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ. ಮಹಿಳೆಯರ ಸಮಾನತೆಗಾಗಿ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ವಾಕಥಾನ್ ನಡೆಯುತ್ತಿದೆ. ವಾಕಥಾನ್ನಲ್ಲಿ ಮಹಿಳೆಯರ ಬುಲೆಟ್ ರೈಡ್ ವಿಶೇಷ ಗಮನ ಸೆಳೆಯುತ್ತಿದೆ. ಹೀಲ್ಸ್ ಆನ್ ವ್ಹೀಲ್ಸ್ ಹಾಗೂ ಶೀ ಫಾರ್ ಸೊಸೈಟಿಯ ಮಹಿಳಾ ಸದಸ್ಯರು ವಾಕಥಾನ್ನಲ್ಲಿ ಬುಲೆಟ್ ಓಡಿಸುವ ಮೂಲಕ ವಾಕಥಾನ್ಗೆ ವಿಶೇಷ ಮೆರಗು ತಂದುಕೊಟ್ಟರು. ಮಹಿಳೆಯರ ಕಲಾ ತಂಡಗಳು ಇಡೀ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಗಿದ್ದಾರೆ.
ಇದನ್ನೂ ಓದಿ: ಕಾರು ತಡೆದ ಟ್ರಾಫಿಕ್ ಪೊಲೀಸ್: ನಡುರಸ್ತೆಯಲ್ಲೇ ಯುವತಿಯಿಂದ ಭಾರೀ ಹೈಡ್ರಾಮ, ವಿಡಿಯೋ ವೈರಲ್
ನಟ ನೆನಪಿರಲಿ ಪ್ರೇಮ್ ಹಾಗೂ ನಟಿ ಅದಿತಿ ಪ್ರಭುದೇವ ವಾಕಥಾನ್ನಲ್ಲಿ ಹೆಜ್ಜೆ ಹಾಕುವ ಮೂಲಕ ವಾಕಥಾನ್ ಹೊಸ ಉತ್ಸಾಹ ತಂದುಕೊಟ್ಟರು.
ವಾಕಥಾನ್ ಬಳಿಕ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿವೆ.
ವೇಷಭೂಷಣ ಸ್ಪರ್ಧೆ: ವೀರನಾರಿಯರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಭಾಗವಹಿಸಬಹುದು. ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ನಗದು ಬಹುಮಾನ ಮತ್ತು ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
ಮಹಿಳಾ ಗೋಷ್ಠಿ: ಮಧ್ಯಾಹ್ನ 1 ಗಂಟೆಗೆ ‘ಆಧುನಿಕ ಮಹಿಳೆ ಸಾಧನೆ, ಸಂವೇದನೆ’ ವಿಷಯ ಕುರಿತ ಮಹಿಳಾ ಗೋಷ್ಠಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ನಟಿ ಸಪ್ತಮಿ ಗೌಡ, ಉದ್ಯಮಿ ಸ್ನೇಹಾ ರಾಕೇಶ್ ಇರಲಿದ್ದಾರೆ.
ಸಾಂಸ್ಕೃತಿಕ ವೈವಿಧ್ಯ: ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ‘ನಾರಿ ಶಕ್ತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಬೆಳಗ್ಗೆ 10 ಗಂಟೆಗೆ ಗಾನಶ್ರೀ ತಂಡದಿಂದ ಸುಗಮ ಸಂಗೀತ, ಜಾನಪದ ಸಂಗೀತಗೋಷ್ಠಿ ನಡೆಯಲಿದೆ. ಬಳಿಕ ವೀರಗಾಸೆ ಕುಣಿತ, ಕಂಸಾಳೆ, ಡೊಳ್ಳು ವಾದನ, ಯಕ್ಷಕಲಾ ಅಕಾಡೆಮಿ ವತಿಯಿಂದ ಮಹಿಳಾ ಯಕ್ಷಗಾನ, ಇಂದುಶ್ರೀ ರವೀಂದ್ರ ಅವರಿಂದ ಧ್ವನಿಮಾಯೆ ಮನರಂಜನೆ ಹಾಗೂ ‘ವೀರನಾರಿಯರ ವೇಷಭೂಷಣ ಸ್ಪರ್ಧೆ’ ಸೇರಿ ಇತರೆ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಶ್ವ ಮಹಿಳಾ ದಿನಾಚರಣೆ: ಹುಬ್ಬಳ್ಳಿಯಲ್ಲಿ ವಾಕಾಥಾನ್ಗೆ ಚಾಲನೆ, ವಿಜಯವಾಣಿ- ದಿಗ್ವಿಜಯ ನ್ಯೂಸ್ ಆಯೋಜನೆ