ಮಳವಳ್ಳಿ: ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ಅವರ ಜೀವನದ ಸಂಭ್ರಮ ಕ್ಷಣವಾಗಿರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ಮಾತೃತ್ವ ಸುರಕ್ಷ ಅಭಿಯಾನ ದಿನದ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣೆಂದು ಬಹಳಷ್ಟು ಜನರು ತಾತ್ಸಾರ ಮಾಡುವವರಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ನರೇಂದ್ರಸ್ವಾಮಿ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 30 ಗರ್ಭಿಣಿಯರಿಗೆ ಸೀಮಂತಶಾಸ್ತ್ರ ನೆರವೇರಿಸಲಾಯಿತು.
ಸಿಡಿಪಿಒ ದೀಪಾ, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಜ್ಯೋತಿ, ಪ್ರಯೋಗಶಾಲೆ ತಾಂತ್ರಿಕ ಅಧಿಕಾರಿ ನಾಗರಾಜು, ಫಾರ್ಮಸಿಸ್ಟ್ ರವಿ, ಆಪ್ತ ಸಮಾಲೋಚಕರಾದ ಸುರೇಶ್, ರತಿ
ಇತರರಿದ್ದರು.