ನವದೆಹಲಿ: ಅಕ್ರಮ ಆಸ್ತಿ ವರ್ಗಾವಣೆ, 200 ಕೋಟಿ ರೂ. ಸುಲಿಗೆ ಪ್ರಕರಣ ಸೇರಿದಂತೆ ಹಲವಾರು ವಂಚನೆ ಪ್ರಕರಣದಲ್ಲಿ ಬಂಧನವಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಮಹಾವಂಚಕ ಸುಕೇಶ್ ಚಂದ್ರಶೇಖರ್, ಜೈಲಿನಿಂದಲೇ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಪತ್ರದ ಮೂಲಕ ಹೋಳಿ ಹಬ್ಬದ ಶುಭಕೋರಿದ್ದಾರೆ.
ಜಾಕ್ವೆಲಿನ್ ಮಾತ್ರವಲ್ಲದೆ, ತನ್ನ ಅಭಿಪ್ರಾಯಗಳನ್ನು ಎಲ್ಲರ ಎದುರು ತೆರೆದಿಡುವ ಮಾಧ್ಯಮಗಳಿಗೂ ಸುಕೇಶ್ ಧನ್ಯವಾದ ತಿಳಿಸಿದ್ದಾನೆ. ಕುಟುಂಬ, ಸ್ನೇಹಿತರು ಬೆಂಬಲಿಗರು, ಶತ್ರುಗಳು ಹಾಗೂ ತನ್ನ ಕಾನೂನು ತಂಡಕ್ಕೂ ಸುಕೇಶ್, ಹೋಳಿಯ ಶುಭಕೋರಿದ್ದಾರೆ.
ಆದರೆ, ಜಾಕ್ವೆಲಿನ್ ಬಗ್ಗೆ ಪತ್ರದಲ್ಲಿ ಜಾಸ್ತಿ ಉಲ್ಲೇಖ ಮಾಡಿರುವ ಸುಕೇಶ್, ವಿಶೇಷ ಸ್ಥಾನವನ್ನು ನೀಡಿದ್ದಾರೆ. ಜಾಕ್ವೆಲಿನ್ರನ್ನು ಅತ್ಯಂತ ಅದ್ಭುತ ಮಾನವ ಹಾಗೂ ನನ್ನ ಸುಂದರಿ ಎಂದು ಕರೆದಿದ್ದಾನೆ ಮತ್ತು ಆಕೆಯ ಜೀವನದಲ್ಲಿ ಅಳಿಸಿ ಹೋದ ಮತ್ತು ಕಳೆಗುಂದಿದ್ದ ಬಣ್ಣವನ್ನು ಮರಳಿ ತಂದುಕೊಡುವುದಾಗಿ ಭರವಸೆ ನೀಡಿದ್ದಾನೆ. ಇದು ನನ್ನ ಜವಾಬ್ದಾರಿ ಆಗಿದೆ ಎಂದಿರುವ ಸುಕೇಶ್ ಈ ವರ್ಷ ಉಲ್ಲಾಸಭರಿತವಾಗಿರಲಿ ಎಂದು ಹಾರೈಸಿದ್ದಾರೆ.
ಬೇಬಿ ಗರ್ಲ್ ನಿನಗೋಸ್ಕರ ನಾನು ಯಾವುದೇ ಮಟ್ಟಕ್ಕೂ ಹೋಗಲು ಸಿದ್ಧ. ಐ ಲವ್ ಯು ಎಂದು ಜಾಕ್ವೆಲಿನ್ ಫರ್ನಾಂಡೀಸ್ಗೆ ಸುಕೇಶ್ ಪತ್ರದ ಮೂಲಕ ಹೋಳಿ ಹಬ್ಬದ ಶುಭ ಕೋರಿದ್ದಾನೆ.
ದೆಹಲಿಯ ಪಟಿಯಾಲಾ ಕೋರ್ಟ್ನಲ್ಲಿ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸುಕೇಶ್, ಜಾಕ್ವೆಲಿನ್ ಫರ್ನಾಂಡೀಸ್ ಈ ಹಗರಣದಲ್ಲಿ ಭಾಗಿಯಾಗಿಲ್ಲ ಮತ್ತು ನಾನು ಇರುವವರೆಗೂ ಆಕೆ ಚಿಂತಿಸಬೇಕಿಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಾಕ್ವೆಲಿನ್, ವಂಚಕ ನನ್ನ ಜೀವನವನ್ನೇ ನರಕವಾಗಿಸಿದ್ದಾನೆ ಹಾಗೂ ನನ್ನ ವೃತ್ತಿಜೀವನ ಮತ್ತು ಜೀವನೋಪಾಯವನ್ನು ಹಾಳುಮಾಡಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಏನಿದು ಕೇಸ್? ಯಾರೀ ಸುಕೇಶ್ ಚಂದ್ರಶೇಖರ್?
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಕುಟುಂಬದಿಂದ ತಾನು ಬಂದವನು ಎಂದು ಹೇಳಿಕೊಂಡಿದ್ದ ಈ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದ. ತನ್ನ ಹೆಸರನ್ನು ಸುರೇಶ್ ಎಂದು ಹೇಳಿಕೊಂಡಿದ್ದ. ಜಾಕ್ವೆಲಿನ್ ಜತೆ ಸ್ನೇಹ ಬೆಳೆಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಈತ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಚೇರಿ ಸಂಖ್ಯೆಯನ್ನು ನಕಲು ಮಾಡಿ ಜಾಕ್ವೆಲಿನ್ ಅವರನ್ನು ಸಂಪರ್ಕಿಸಿದ್ದಾನೆ. ನಂತರ ಆಕೆಯ ಸ್ನೇಹ ಬೆಳೆಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಜಾಕ್ವೆಲಿನ್ ಅವರ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕು. ಸನ್ ಟಿವಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ. ನಾನು ಜಯಲಲಿತಾ ಕುಟುಂಬಸ್ಥ, ಚೆನ್ನೈನಲ್ಲಿ ವಾಸವಾಗಿದ್ದೇನೆ’ ಎಂದು ಈತ ಜಾಕ್ವೆಲಿನ್ಗೆ ಹೇಳಿದ್ದಾನೆ. ನಂತರ ಆಕೆಯ ಮೇಕಪ್ ಆರ್ಟಿಸ್ಟ್ಗೆ ಗೃಹ ಸಚಿವ ಅಮಿತ್ ಷಾ ಅವರ ಕಚೇರಿಯಿಂದ ಕರೆ ಬಂದಂತೆ ಕರೆ ಮಾಡಿದ್ದಾನೆ. ಆ ಮೂಲಕ ಸುಕೇಶ್ ಸರ್ಕಾರದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಜಾಕ್ವೆಲಿನ್ ತಿಳಿದುಕೊಂಡು ಮೋಸ ಹೋಗಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಅಕ್ರಮ ತಡೆಗೆ ಐರಿಸ್ ಸ್ಕ್ಯಾನರ್: ಕಡಿಮೆ ಪಡಿತರ ಕೊಟ್ಟರೆ ಸೈರನ್ ಕೂಗುವ ಯಂತ್ರ
ಸುಕೇಶ್ ಚಂದ್ರಶೇಖರ್ ರೋಹಿಣಿ ಜೈಲಿನಲ್ಲಿದ್ದಾಗ, ಫೋನ್ ವಂಚನೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ದಂಧೆಯನ್ನು ನಡೆಸುತ್ತಿದ್ದ. ಈತ ವಂಚನೆಯ ಮಾಸ್ಟರ್ಮೈಂಡ್. 17 ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನ ಭಾಗವಾಗಿದ್ದಾರೆ. ಅವರ ವಿರುದ್ಧ ಅನೇಕ ಎಫ್ಐಆರ್ಗಳಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಇರುವಾಗಲೂ ತಂತ್ರಜ್ಞಾನದ ಸಹಾಯದಿಂದ ಜನರನ್ನು ವಂಚಿಸುತ್ತಿದ್ದ. ಕರೆ ಮಾಡಿದ ಫೋನ್ ಸಂಖ್ಯೆಯ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು ಎಂಬಂತೆ ಕರೆ ಮಾಡಿದವರಿಗೆ ನಂಬರ್ ಡಿಸ್ಪ್ಲೇ ಆಗುತ್ತಿತ್ತು. ಇದರಿಂದ ಎಲ್ಲರೂ ಮೋಸ ಹೋಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಸುಕೇಶ್ ಜೈಲು ಕೋಣೆಯ ಮೇಲೆ ರೇಡ್: ಐಷಾರಾಮಿ ವಸ್ತುಗಳು ಪತ್ತೆ, ಕಣ್ಣೀರಾಕಿದ ಮಹಾವಂಚಕ