ಬೆಂಗಳೂರು: ಐಪಿಎಲ್-17ರಲ್ಲಿ ಆರಂಭಿಕ 8ರಲ್ಲಿ 7ರಲ್ಲಿ ಸೋತು, ಇದೀಗ ಸತತ 5 ಜಯದೊಂದಿಗೆ ಬೀಗುತ್ತಿರುವ ಆರ್ಸಿಬಿ ಪಾಲಿಗೆ ಈಗ 18 ಅದೃಷ್ಟದ ಸಂಖ್ಯೆ ಆಗಬೇಕಿದೆ! ಯಾಕೆಂದರೆ ಮೇ 18ರಂದು ಬೆಂಗಳೂರಿನಲ್ಲಿ ಸಿಎಸ್ಕೆ ವಿರುದ್ಧ ನಡೆಯಲಿರುವ ಕಡೇ ಲೀಗ್ ಪಂದ್ಯ ಆರ್ಸಿಬಿ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ 18 ಜೆರ್ಸಿ ನಂಬರ್ ಆಟಗಾರ ವಿರಾಟ್ ಕೊಹ್ಲಿ ಸಿಡಿದರೆ ಮತ್ತು 18 ರನ್ಗಳಿಂದ ಗೆದ್ದರೆ ಆರ್ಸಿಬಿಗೆ ಪ್ಲೇಆಫ್ ಅವಕಾಶ ಒಲಿಯಲಿದೆ. ಆದರೆ ಅದಕ್ಕೆ ಮುನ್ನ ಲಖನೌ ತಂಡ ಮಂಗಳವಾರ ಡೆಲ್ಲಿ ವಿರುದ್ಧ ಸೋಲಬೇಕು ಅಥವಾ ಶುಕ್ರವಾರ ಮುಂಬೈ ವಿರುದ್ಧವಾದರೂ ಸೋಲಬೇಕು ಅಥವಾ ಸನ್ರೈಸರ್ಸ್ ತಂಡ ಉಳಿದೆರೂ ಪಂದ್ಯಗಳನ್ನು ಹೀನಾಯವಾಗಿ ಸೋಲಬೇಕು. ಇವೆರಡೂ ಫಲಿಸಿದರೆ ಆರ್ಸಿಬಿ-ಸಿಎಸ್ಕೆ ಎರಡೂ ಪ್ಲೇಆಫ್ಗೇರುವ ಅವಕಾಶವನ್ನೂ ಹೊಂದಿವೆ.
ಆರ್ಸಿಬಿ-ಸಿಎಸ್ಕೆ ಪಂದ್ಯ ನಾಕೌಟ್ ಎನಿಸಿದರೆ, ಗೆಲುವಿನ ಜತೆಗೆ ರನ್ರೇಟ್ನಲ್ಲೂ ಸಿಎಸ್ಕೆ ತಂಡವನ್ನು ಹಿಂದಿಕ್ಕುವ ಸವಾಲು ಆರ್ಸಿಬಿಗೆ ಎದುರಾಗಲಿದೆ. ಆಗ ಆರ್ಸಿಬಿ ಮೊದಲು ಬ್ಯಾಟಿಂಗ್ಗೆ ಇಳಿದು 200 ರನ್ ಗಳಿಸಿದರೆ ಕನಿಷ್ಠ 18 ರನ್ಗಳಿಂದಾದರೂ ಗೆಲ್ಲಬೇಕು. ಒಂದು ವೇಳೆ ಸಿಎಸ್ಕೆ ಮೊದಲು ಬ್ಯಾಟಿಂಗ್ಗೆ ಇಳಿದು 200 ರನ್ ಪೇರಿಸಿದರೆ, ಆರ್ಸಿಬಿ 18.1 ಓವರ್ಗಳಲ್ಲಿ ಅಂದರೆ ಕನಿಷ್ಠ 11 ಎಸೆತ ಬಾಕಿ ಇರುವಂತೆಯೇ ಗೆಲ್ಲಬೇಕಾಗುತ್ತದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ಆರ್ಸಿಬಿ ಹೊರಬೀಳಲಿದೆ.
ಒಂದು ರನ್ ಸೋಲೇ ಗೆಲುವಿನ ಮೆಟ್ಟಿಲು?
ಐಪಿಎಲ್ಗೆ ಮುನ್ನ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್) ಆರ್ಸಿಬಿ ಮಹಿಳಾ ತಂಡ ತನ್ನ 7ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 1 ರನ್ನಿಂದ ಸೋತಿತು. ಬಳಿಕ ಪುಟಿದೆದ್ದು ಫೈನಲ್ ಸಹಿತ ಸತತ 3 ಪಂದ್ಯ ಜಯಿಸುವ ಮೂಲಕ ಸ್ಮೃತಿ ಮಂದನಾ ಬಳಗ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತು. ಇದೀಗ ಐಪಿಎಲ್ನಲ್ಲೂ ಆರ್ಸಿಬಿ ತಂಡ ಕೆಕೆಆರ್ ವಿರುದ್ಧ 1 ರನ್ನಿಂದ ಸೋತ ಬಳಿಕ ಪುಟಿದೆದ್ದು ಸತತ 5 ಪಂದ್ಯ ಗೆದ್ದುಕೊಂಡಿದೆ. ಅಂದರೆ ಅದೇ ರೀತಿಯಲ್ಲಿ ಪ್ಲೇಆಫ್ ಪ್ರವೇಶಿಸುವುದು ಮಾತ್ರವಲ್ಲದೆ ಚೊಚ್ಚಲ ಕಪ್ ಕನಸನ್ನೂ ನನಸಾಗಿಸಲಿದೆ ಎಂಬುದು ಆರ್ಸಿಬಿ ಅಭಿಮಾನಿಗಳ ಸಿಹಿ ಲೆಕ್ಕಾಚಾರವಾಗಿದೆ.
ಆರ್ಸಿಬಿ ವಿರುದ್ಧ ಡೆಲ್ಲಿ ತಂಡದ ಸೋಲಿಗೆ ಕಾರಣ ವಿವರಿಸಿದ ಹಂಗಾಮಿ ನಾಯಕ ಅಕ್ಷರ್ ಪಟೇಲ್