More

    ಮೋದಿಯವರ ಮೇಲೇಕೆ ಇಷ್ಟೊಂದು ದ್ವೇಷ?; ಕೆ.ಎಸ್​. ನಾರಾಯಣಾಚಾರ್ಯರ ಅಂಕಣ

    ಮೋದಿಯವರ ಮೇಲೇಕೆ ಇಷ್ಟೊಂದು ದ್ವೇಷ?; ಕೆ.ಎಸ್​. ನಾರಾಯಣಾಚಾರ್ಯರ ಅಂಕಣನೆಹ್ರೂ ಕಾಲದಲ್ಲಿ ಲಡಾಖ್​ನ ‘ಅಕ್ಸಾಯಿ ಚಿನ್’ ಚೀನಿಯರ ಪಾಲಾಯ್ತಲ್ಲ? ‘ಹೋದರೆ ಹೋಗಲಿ, ಅಲ್ಲಿ ಏನೂ ಬೆಳೆಯುವುದಿಲ್ಲ’ ಎಂದರಲ್ಲ ಈ ನೆಹ್ರೂ? ಟಿಬೆಟ್ ಹೋಯಿತ್ತಲ್ಲ? ಆದರೂ ಬುದ್ಧಿ ಬರೋಲ್ಲ! ಬಲೂಚಿಗಳು, ನೇಪಾಳ, ಸಿಲೋನ್ ಎಂಬ ಲಂಕಾ, ಬರ್ವ ಸಮೀಪದ ದ್ವಯ ದ್ವೀಪಗಳು- ಭಾರತದ ಒಕ್ಕೂಟದಲ್ಲಿ ಸೇರದಂತೆ ನೆಹ್ರೂ ಶತ್ರುವೃದ್ಧಿ ಮಾಡಿದರು.

    ಬೀದಿಯಲ್ಲೊಂದು ನಾಯಿ ಮುದುಡಿಕೊಂಡು ಬಿದ್ದಿರುತ್ತದೆ ಎನ್ನಿ. ನೀವು ದಾರಿಯಲ್ಲಿ ಹೋಗುತ್ತ ನಿಮ್ಮ ಕೀಲಿಕೈ ಗೊಂಚಲೋ, ಪೆನ್ನೋ ಕೆಳಗೆ ಬಿದ್ದರೆ ಎತ್ತಿಕೊಳ್ಳಲು ಬಗ್ಗುತ್ತೀರಿ! ನಾಯಿ ಬೆದರಿ, ಬೊಗಳುತ್ತ ಓಡುತ್ತದೆ. ಇದು ಒಂದು ‘ಸಿಂಡ್ರೋಮ್! ಅದರ ಬುದ್ದಿ ಅಷ್ಟೇ, ‘ನನಗೆ ಹೊಡೆಯಲು ಇವನು ಬಗ್ಗಿ ಕಲ್ಲು ತೆಗೆದುಕೊಳ್ಳಲು ಯತ್ನಿಸಿದ್ದಾನೆ’ ಅಂತ. ನೀವು ಕೈ ಮುಗಿದು, ‘ನಾಯಿಯೇ ಹಾಗಲ್ಲ. ನಿನ್ನ ಮೇಲೆ ಕೋಪವಿಲ್ಲ’ ಅಂತ ಉಪನ್ಯಾಸ ಮಾಡಿದರೆ ಅದರ ತಲೆಗೇ ಹತ್ತುವುದಿಲ್ಲ. ‘ಫಿಕ್ಸ್​ಡ್ ಮೆಂಟಾಲಿಟಿ’, ‘ಸ್ಥಗಿತ ಬುದ್ಧಿ’, ‘ವಿಚಾರಕ್ಕೆ ತೆರೆದುಕೊಳ್ಳದ್ದು’, ಎಲ್ಲೋ ಕೆಲವರಿಗೆ ಬುದ್ಧಿ ಚಾಲನೆಯಲ್ಲಿರುತ್ತದೆ. ಗಾಯತ್ರೀ ಮಂತ್ರದಲ್ಲಿ ‘ಧಿಯಃ’ ಎಂಬ ಬಹುವಚನ ಪ್ರಯೋಗ ಇದನ್ನು ತೋರಿಸುತ್ತದೆ.

    ಒಬ್ಬನದೇ ಬುದ್ಧಿಯೂ ಸದಾ ಕಾಲ ಒಂದೇ ರೀತಿಯಲ್ಲಿ ಇರುವುದಿಲ್ಲ! ಅನಂತ ವಿಕಾರಗಳು! ಹಾಗೆ ಮೋದಿ, ಗುಜರಾತ್​ನಲ್ಲಿ ಅಧಿಕಾರಕ್ಕೇರಿದಂದಿನಿಂದ ಕಾಂಗ್ರೆಸ್ಸಿಗೆ ಗೊತ್ತು ‘ಇವರು ನಮ್ಮ ಸರ್ವಸ್ವ ನಾಶ ಮಾಡಿ ಬಿಡುತ್ತಾರೆ’ ಅಂತ. ಗೋಧ್ರಾ, ಗೋಧ್ರೋತ್ತರ, ವಿಚಾರಣೆ ಸರಣಿಗಳು, ಕೇಸು ದಾಖಲಾತಿಗಳು, ಪೊಲೀಸರು, ಸಿಬಿಐ, ವಿದೇಶೀ ಪತ್ರಿಕೆ, ಮಾಧ್ಯಮಗಳು, ‘ಮೋದಿಗೆ ವೀಸಾ ಕೊಡಬೇಡಿ, ಕಟುಕ’ ಅಂತ ಅಮೆರಿಕೆಗೆ ಒತ್ತಡ- ಯಾವುದೂ ಫಲಪ್ರದವಾಗದೆ, ಇಂದು ಅಮೆರಿಕ, ಮೋದಿಯವರಿಗೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಕೊಡುವುದರೊಂದಿಗೆ, ಕಾಂಗ್ರೆಸ್ಸಿಗೆ ಹುಚ್ಚು ಹಿಡಿದಿದೆ! ಏನು ಕಾರಣ? ಎಲ್ಲರಿಗೂ ಗೊತ್ತಿದ್ದ ಅಂಶಗಳನ್ನು ಒಬ್ಬ ನಿವೃತ್ತ ಸೇನಾಧಿಕಾರಿ ಕೂಡಿಸಿ, ಇತಿಹಾಸದ ದಿಕ್ಕು, ತಪ್ಪುದಾರಿ, ಗುರಿಗಳನ್ನು ಜೋಡಿಸಿ ತೋರಿಸಿರುವ ಒಂದು ಸತ್ಯವನ್ನು ತಿಳಿಸುತ್ತೇವೆ. ಅದಕ್ಕೆ ಮೊದಲು ಅಷ್ಟು ಹಿನ್ನೆಲೆ ಬೇಕು. ‘ನೆಹ್ರೂಯಿಸಂ’, ‘ಗಾಂಧಿಸಂ’ಗಳ ಗುಂಗು ಇಲ್ಲಿ ಕಾಂಗ್ರೆಸ್ಸೇತರ ಕೇಂದ್ರ ಸರ್ಕಾರಗಳ ಕಾಲದಲ್ಲಿ ಎಷ್ಟು ಹಿಡಿದಿತ್ತೆಂದರೆ- ಪಾಕಿಸ್ತಾನ, ಚೀನಾ, ಯಾರೇ ಗಡಿ ಅತಿಕ್ರಮ ಮಾಡಿದರೂ, ನಾವು ಬರೀ ಹೇಳಿಕೆಗಳಲ್ಲಿ ಖಂಡಿಸುತ್ತ ನಿಷ್ಕ್ರಿಯರಾಗಿರಬೇಕು!

    Non-alignment, disarmament, Secularism, Panchasheela, ಎಂಬ ಹುಸಿ, ಅಪಾಯಕರ ಶ್ರದ್ಧೆಗಳಲ್ಲಿ ಭಾರತ ಸಾಯಬೇಕು. ಇಲ್ಲಿ ಭಾರತ ಪೂರ್ತಿ ಇಸ್ಲಾಂಮಯ ಆದರೂ, ಹಿಂದೂಗಳು ಸಹಿಸಬೇಕು. ಕಾಶ್ಮೀರ ಸ್ವತಂತ್ರವಾಗಿರಬೇಕು. ಹಿಂದೂದಮನ ಹಿಂದೂಗಳಿಗೆ ಒಗ್ಗಿರುವ ಮನನೆಲೆ. ‘ಸರ್ವಧರ್ಮ ಸಮಭಾವ’ದಲ್ಲಿ ಇತರರು ಕೊಬ್ಬಿದರೆ, ಕಮ್ಯೂನಲ್ ದಳ್ಳುರಿ ಎದ್ದರೆ ಅಲ್ಲೇ ಲಾಭ!’ ಇತ್ಯಾದಿ ಗ್ರಹಿಕೆಗಳಿಗೆ ಮೋದಿ ಕೊಡಲಿಏಟು ಹಾಕಿದ್ದಾರೆ! ಅದು ಆಗುತ್ತವೆಂಬ ಭಯ, ಮೋದಿ ಉದಯದಲ್ಲೇ ಕಾಂಗ್ರೆಸ್ಸಿಗೆ ಎದ್ದಿತ್ತು. ನಮ್ಮವರೇ ಸೋನಿಯಾ ಸುತ್ತ ಸುತ್ತುತ್ತ ಈಗ ಸರ್ವನಾಶ ಭಾವದಲ್ಲಿ ಹೊರಬರಲು ವಿಫಲ ಯತ್ನರಾಗಿದ್ದಾರೆ- ಕಪಿಲ್ ಸಿಬಲ್, ಗುಲಾಂ ನಬೀ, ಇಂಥವರು. ಮಣಿಶಂಕರ್ ಅಯ್ಯರ್, ಸಲ್ಮಾನ್ ಖುರ್ಷಿದ್, ಮನಮೋಹನ್ ಸಿಂಗ್, ರಾಹುಲ್ ಇಂಥವರು ಭಯ ವರ್ತಲದಿಂದ ಹೊರ ಬರಲಾರರು! ಇದು ಹಿನ್ನೆಲೆ. ಈಗ ಮುನ್ನೆಲೆಯಲ್ಲಿ ಒಂದು ಚಿತ್ರ ಮಾಡಿಕೊಳ್ಳಿ. ಈ ‘ರೋಗ’ ಯಾವತ್ತು ಆರಂಭವಾಯ್ತು? ಮೌರ್ಯ, ಅಶೋಕ, ಶಸ್ತ್ರ ಸಂನ್ಯಾಸ ಮಾಡಿ, ಚಾಣಕ್ಯ ಚಂದ್ರಗುಪ್ತರು ಶ್ರಮದಿಂದ ಕಟ್ಟಿದ ಸಾಮ್ರಾಜ್ಯ ನಾಶಕ್ಕೆ ಮುಹೂರ್ತ ಇಟ್ಟಂದಿನಿಂದ. ಅಲ್ಲಿದೆ Disarmament ಉಗಮ. ಅದರ ಮೂಲ ವೇದೇತರ ಗ್ರಹಿಕೆಗಳು. ‘ದೇವಾಸುರ ಯುದ್ಧ ಇಲ್ಲಿ. ದೇವ-ಅಸುರ ಆದದ್ದು ಸಂದರ್ಭದಿಂದ. ಇದು ಮಾಯಾಪ್ರಪಂಚ. ಶಾಶ್ವತ ಮೌಲ್ಯಗಳೆಂಬುವು ಇಲ್ಲ. ಎಲ್ಲರೂ ಒಂದೇ’ ಎಂಬ ಪೊಳ್ಳು ಸಮೀಕರಣದ ಭಯಾನಕ ಗ್ರಹಿಕೆಯಲ್ಲಿ. ‘Pacifism’ ಎಂಬುದು ಈ ರೋಗದ ಇನ್ನೊಂದು ಹೆಸರು. ‘ಅತೀ ಶಾಂತಿವಾದ’! ಅದೇ ‘ಗಾಂಧೀವಾದ’. ಈ ದೇಶದ ಸ್ವಾತಂತ್ರ್ಯ ಸಂಗ್ರಾಮದ ನಂತರ ಅಧಿಕಾರ ಹಿಡಿದವರಿಗೆ ಅಡರಿದ ಮಹಾರೋಗ. ಆ ಮುನ್ನ? ಮಹಮ್ಮದ್ ಘೋರಿಯನ್ನು ಕ್ಷಮಿಸಿ, ಜೀವ ಉಳಿಸಿದ ಪೃಥ್ವೀರಾಜನಿಗೆ ಹಿಡಿದದ್ದು ಇದೇ ರೋಗ- ಅತೀ ಕ್ಷಮೆ.

    ಈ ಒಂದು ತಪ್ಪು ಸಾವಿರ ವರ್ಷದ ಗುಲಾಮಗಿರಿಗೆ ದಾರಿಯಾಯ್ತು. ಬ್ರಿಟಿಷರು ಈ ದೌರ್ಬಲ್ಯದ ದುರುಪಯೋಗ ಮಾಡಿ, ರಾಜ್ಯ ಹಿಡಿದು ತಳವೂರಿದರು. ಅವರ ನಂತರ ನೆಹ್ರೂಗೆ ಹಿಡಿದದ್ದು ಈ ಬಳವಳಿಯ ರೋಗ. ನೆಹ್ರೂ ಕಾಲದಲ್ಲಿ ಲಡಾಖ್​ನ ‘ಅಕ್ಸಾಯಿ ಚಿನ್’ ಚೀನಿಯರ ಪಾಲಾಯ್ತಲ್ಲ? ‘ಹೋದರೆ ಹೋಗಲಿ, ಅಲ್ಲಿ ಏನೂ ಬೆಳೆಯುವುದಿಲ್ಲ’ ಎಂದರಲ್ಲ ಈ ನೆಹ್ರೂ? ಟಿಬೆಟ್ ಹೋಯಿತ್ತಲ್ಲ? ಆದರೂ ಬುದ್ಧಿ ಬರೋಲ್ಲ! ಬಲೂಚಿಗಳು, ನೇಪಾಳ, ಸಿಲೋನ್ ಎಂಬ ಲಂಕಾ, ಬರ್ವ ಸಮೀಪದ ದ್ವಯ ದ್ವೀಪಗಳು- ಭಾರತದ ಒಕ್ಕೂಟದಲ್ಲಿ ಸೇರದಂತೆ ನೆಹ್ರೂ ಶತ್ರುವೃದ್ಧಿ ಮಾಡಿದರು. ದೇಶವೇ ಹರಿಯಿತು! ರಕ್ತವೇ ಹರಿಯಿತು! ನೆಹ್ರೂಗೆ ಏನೂ ಅನ್ನಿಸಲಿಲ್ಲ! Ashoka Syndrome ರೋಗ ಕೆಲಸ ಮಾಡಿತ್ತು!

    ಈಗಲೋ? ರಾಹುಲ್​ರು ಚೀನಾದೊಡನೆ ಸೌಹಾರ್ದದಿಂದ ಇದ್ದಾರೆ. ನೆಹ್ರೂ ತಪು್ಪಗಳೆಲ್ಲ ಈಗ ನರೇಂದ್ರ ಮೋದಿಯವರ ದೀರ್ಘದೃಷ್ಟಿ, ಕಾರ್ಯತತ್ಪರತೆಯಿಂದ ಮಾಯವಾಗುತ್ತಿವೆ. ಅರ್ಥಾತ್ Nehruism ಸಾಯುತ್ತಿದೆ. ಜಗತ್ತು ಭಾರತದತ್ತ ತಿರುಗಿ, ಸ್ನೇಹ ಬಯಸಿ, ಪಾಕಿಸ್ತಾನ ಬೆತ್ತಲಾಗಿ, ಚೀನಾದ ಮರಳುತನಕ್ಕೆ ನರಳಿ, ನರೇಂದ್ರ ಮೋದಿ ಈಗ For the First time, real PM ಆಗಿದ್ದಾರೆ.

    ಕಾಂಗ್ರೆಸ್ಸು? ಅಯ್ಯೋ? ಶ್ಯಾಂಪ್ರಸಾದ್ ಮುಖರ್ಜಿ, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರರು ಎಲ್ಲ ಸತ್ತು ಕಾಂಗ್ರೆಸ್ಸಿಗೆ ಲಾಭ ಉಳಿದಿಲ್ಲ! ಈಗ ಕೋಪ ನರೇಂದ್ರ ಮೋದಿಯವರ ಮೇಲೆ. ‘ನೆಹ್ರೂಯಿಸಂ’ ರೋಗದ ಗರಿಷ್ಠ ಬಲಿ ಇಂದಿರಾ ಗಾಂಧಿ! ಬಾಂಗ್ಲಾ ವಿಮೋಚನೆಯ ನಂತರ ‘ಶಿಮ್ಲಾ’ ಒಪ್ಪಂದದಲ್ಲಿ ಗೆದ್ದದ್ದನ್ನೆಲ್ಲ ಬಿಟ್ಟುಕೊಟ್ಟ ಮಂಕು, ಮರುಳ ಮಾಯೆಯ ಉದಾಹರಣೆ? ಅದಕ್ಕೆ ಮೋದಿಯಿಂದ ಈಗಣ ಕೊಡಲಿ ಏಟು? ಪಾಕಿಸ್ತಾನ ಎಷ್ಟು ಸಲ ನಮ್ಮ ಮೇಲೆ ಆಕ್ರಮಣ ಮಾಡಿತ್ತು? ಈಗ ಕಾಶ್ಮೀರದ 370 ಆಕ್ಟ್ ರದ್ದಾಗಿ ಚುನಾವಣೆಯಲ್ಲೂ ಭಾಜಪ ಒಳ್ಳೆಯ ಸಾಧನೆ ತೋರಿದೆ. ‘ದುಷ್ಟತುಷ್ಟೀಕರಣ’ ಈಗ ಇನ್ನು ನಡೆಯುವುದಿಲ್ಲ. ಕೇರಳ, ಹೈದರಾಬಾದು ದಾರಿಗೆ ಬರುತ್ತಿದೆ. ಕಾಂಗ್ರೆಸ್ಸು ದಿಕ್ಕು ಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ನಡೆಸಿದರು. ‘ಅದು ನಡೆಯಲೇ ಇಲ್ಲ’ ಎಂದರು ರಾಹುಲ್ ಸಾಹೇಬ್! ಪಾಕಿಸ್ತಾನ ಸ್ವಯಂ ಒಪ್ಪಿ ಹೇಳಿಕೆ ಇತ್ತಿದೆ. ಪಾಕಿಸ್ತಾನ ದಿವಾಳಿಯಾಗಿದೆ. ಚೀನಾ ನಮ್ಮ ಅಕ್ಕಿಯ ಮೇಲೆ ಬದುಕಿ ಆರ್ಥಿಕ ದಿವಾಳಿತನದಲ್ಲಿದೆ!

    ಹಿಂದುತ್ವ ಶಕ್ತಿಯ ಬಲ ನೋಡಿ: 70 ವರ್ಷ ನಮಗೆ ಅರ್ಥವಾಗಲಿಲ್ಲ= ಕಾಂಗ್ರೆಸ್ಸು ಇದನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದೆ ಅಂತ! ಆದರೆ ಐದೇ ವರ್ಷದಲ್ಲಿ ಇಸ್ಲಾಮಿಯರಿಗೆ ಗೊತ್ತಾಯ್ತು- ಇಲ್ಲಿ ಹಿಂದೂ ರಾಷ್ಟ್ರ ಏಳುತ್ತ ಇದೆ ಅಂತ. ದೇಶವಿಭಜನೆ ಆಯ್ತು, ಅನರ್ಥ ಪರಂಪರೆಗೆ, ನರಸತ್ತ ಹಿಂದೂಗಳು ಸ್ಪಂದಿಸಲಿಲ್ಲ! ಕಾಂಗ್ರೆಸ್ ಕೊಳ್ಳೆ ಹೊಡೆಯಿತು! ಇಲ್ಲಿ ಹಿಂದೂಗಳು ಸಿಡಿದೇಳಲಿಲ್ಲ! ಈಗ ಗೋಹತ್ಯೆ ನಿಷೇಧಕ್ಕೆ ಕಾಂಗ್ರೆಸ್ಸು ಬೊಬ್ಬೆ ಹೊಡೆಯುತ್ತಿದೆ. ‘ವೋಟು ಹೋಯಿತಲ್ಲ?’ ಅಪನಾಣ್ಯೀಕರಣ, ಜಿಎಸ್​ಟಿ ಆದಾಗ ಬೊಂಬಡಿ! ಷಾಹೀನ್ ಬಾಗ್ ಮುತ್ತಿಗೆ, ಈಗ ರೈತರ ಹೆಸರಲ್ಲಿ ದಲ್ಲಾಳಿ (ಕಾಂಗ್ರೆಸ್+ಅನುಚರರ) ತಿರುಬೊಬ್ಬೆ! ಕಾಶ್ಮೀರದ ಹಿಂದೂಗಳು ಹೊರದಬ್ಬಲ್ಪಟ್ಟಾಗ ಕಾಂಗ್ರೆಸ್ಸು ಅಳಲಿಲ್ಲ! 370 ರದ್ದು ಆಗಿರುವುದಕ್ಕೆ ಅಳುತ್ತಿದೆ. ಕೇಂದ್ರ ಮಂತ್ರಿ ಕಿಶನ್ ರೆಡ್ಡಿಯರ ಲೆಕ್ಕ- ‘ಪಾಕ್ ಸೃಷ್ಟಿ ಆದಾಗಿನಿಂದ ಕಾಶ್ಮೀರದಲ್ಲಿ 56 ಸಾವಿರ ದೇವಾಲಯಗಳ ನಾಶ ಆಗಿದೆ!’ ನಂಬುತ್ತೀರಾ? ಕಾಂಗ್ರೆಸ್ಸು ತುಟಿ ಬಿಚ್ಚಲಿಲ್ಲ. ಬೇರೆಯೇ ಪ್ರೋಗ್ರಾಂ ಇತ್ತಲ್ಲ? ಚರ್ಚು, ಮಸೀದಿಯ ಮೇಲೆ ಯಾರೋ ಒಂದು ಕಲ್ಲು ಎಸೆದರೆ ಬೊಬ್ಬೆ! ಹಿಂದೂ ಮಾರಣಕ್ಕೆ ಅಲ್ಲ, ಕಾಂಗ್ರೆಸ್​ನ ಎಲ್ಲ ಲೆಕ್ಕ ಉಲ್ಟಾ ಆಯಿತಲ್ಲ? ನೆಹ್ರೂಯಿಸಂ ಸತ್ತಿತಲ್ಲ? ಅದಕ್ಕೆ ಈ ಅರಣ್ಯರೋದನ! ಈಗ ಈ ಹಿಂದೂ ತಲೆಎತ್ತುವ ಕಾರ್ಯ ಯಾವ ಹೊತ್ತಿನಿಂದ ಆರಂಭವಾಯಿತು? ಎಂಬುದನ್ನು ಅಟಲ್ ಬಿಹಾರಿ ವಾಜಪೇಯಿಯವರ 96ನೇ ಜನ್ಮದಿನದ ಸಂದರ್ಭದಲ್ಲಿ ನೆನೆಯುವುದು ಉಚಿತ, ವಿಹಿತವಾಗುತ್ತದೆ. ವಾಜಪೇಯಿ ಪ್ರಧಾನಿಯಾದಾಗ ಈ ತಿರುವು Water shed ಆರಂಭವಾಯ್ತು. ಅಥವಾ ಸ್ವಲ್ಪ ಹಿಂದೆ ಹೋದರೆ ನರಸಿಂಹರಾಯರ ಕಾಲದಿಂದ, ಹೇಗೆ? ರಾಯರು ಅಯೋಧ್ಯೆಯ ವಿವಾದಿತ ಕಟ್ಟಡದ ಉರುಳಿಗೆ ಪರೋಕ್ಷ ಸಹಾಯವಿತ್ತರು. ಅಧಿಕಾರ ಬಿಡುವಾಗ ವಾಜಪೇಯಿಗೆ ‘ಅಣುಬಾಂಬ್ ತಯಾರಿ ಕಾರ್ಯ ಮುಂದುವರಿಸು’ ಎಂದು ಕಿವಿಮಾತೂ ಹೇಳಿದರು. ನೆಹ್ರೂರವರ ನೆಗೆಟಿವ್ ಆರ್ಥಿಕ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದು, ಮುಕ್ತ ಆರ್ಥಿಕ ಚಿಂತನೆ ಆಯ್ತು. ಕಾಂಗ್ರೆಸ್ಸಿಗೆ ಅಲ್ಲಿ ಭಯ! ರಾಯರನ್ನು ಕಾಂಗ್ರೆಸ್ಸಿನ ಅಧ್ಯಕ್ಷಗಿರಿಯಿಂದ ಇಳಿಸಿದ್ದಲ್ಲದೆ, ಸೀತಾರಾಂ ಕೇಸರಿ ಎಂಬ ಸಾಧುಪ್ರಾಣಿಯನ್ನು ಬಲಿಪಶು ಮಾಡಿ ಸೋನಿಯಾರನ್ನು ಪಟ್ಟಕ್ಕೇರಿಸಿತ್ತು. ಪರಿಹಾರ ಸಿಗಲಿಲ್ಲ! ನರೇಂದ್ರ ಮೋದಿಯವರ ಉತ್ಕರ್ಷ ತಡೆಯಲಾಗಲಿಲ್ಲ. ಕುತಂತ್ರದಿಂದ ಯುಪಿಎ 1 ಮತ್ತು 2 ಹತ್ತು ವರ್ಷ ಮಾಡಿ ನಡೆಯಿತು. ಈಗ ಎಲ್ಲ ನರೇಂದ್ರ ಮೋದಿ ನೇತೃತ್ವದಲ್ಲಿ ಆಡಳಿತ ಸರಿಯಾಗಿ ಹಳಿಗೆ ಬಂದಿದೆ. ಬೇಲ್ ಮೇಲೆ ಜೈಲಿನಿಂದ ಹೊರಬಂದ ಪಿ.ಚಿದಂಬರಂ ಗತಿ ನೋಡಿದ್ದೀರಿ! ಕರ್ನಾಟಕದ ಖದೀಮರೋ? ಇನ್ನು ಕೇರಳ, ಬಂಗಾಳದ ಪುಂಡರು, ಎಲ್ಲ ಭಯೋತ್ಪಾದಕರೂ ನಡಗುತ್ತಿದ್ದಾರೆ. ರಾಹುಲ್ ಬೊಬ್ಬೆ! ‘ಇಲ್ಲಿ ಡೆಮಾಕ್ರಸಿ ಇಲ್ಲ!’ ಅಯ್ಯಾ, ಅದು ನಿಜವಾಗಿದ್ದರೆ ನಿಮಗೆ ವಾಕ್ ಸ್ವಾತಂತ್ರ್ಯ ಇರುತ್ತಿತ್ತೆ? ಇದೆಲ್ಲ ಆತ್ಮವಂಚನೆ. ವಾಜಪೇಯಿ ಬರದಿದ್ದರೆ ಈ ತಿರುವು ಅಸಾಧ್ಯವಾಗುತ್ತಿತ್ತು. ಅವರು ಬಿಟ್ಟಲ್ಲಿಂದ ನರೇಂದ್ರ ಮೋದಿ ಮುಂದೆ ಸಾಗುತ್ತಿದ್ದಾರೆ. ಚುನಾವಣೆ ಸುಧಾರಣೆ ಬೇಕಿದೆ. ಭಯೋತ್ಪಾದಕರ ನಿಮೂಲ ವಿನಾಶ ಕಾದಿದೆ. ಪಾಕಿಸ್ತಾನ ನಿರ್ನಾಮವಾಗಿ, ಬಲೂಚಿಸ್ತಾನ ಸ್ವತಂತ್ರವಾಗಿ, ಟಿಬೆಟ್ಟು ಸ್ವತಂತ್ರವಾಗಿ, ನೇಪಾಳ ನಮ್ಮದಾರಿಗೆ ಬರಲಿದೆ. ಅದು ಕಾಂಗ್ರೆಸ್ಸಿಗೆ ಭಯ! ಅದು ಕಂಸನ ಕೊನೆಯ ದಿನಗಳ ಲಕ್ಷಣ!

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts