ನವದೆಹಲಿ: ಅಂದಾಜು 50 ವರ್ಷಗಳಲ್ಲೇ ಮೊದಲು ಎಂದು ಹೇಳಲಾದ ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಸತ್ತ ತನ್ನ ಯೋಧರ ಬಗ್ಗೆ ಚೀನಾ ನಿಖರವಾದ ಸಂಖ್ಯೆ ಹೇಳಲು ನಿರಾಕರಿಸುತ್ತಿದೆ. ಏನಾದರೂ ಒತ್ತಾಯಿಸಿದರೆ, ಸಮಯ ಬಂದಾಗ ಹೇಳುವುದಾಗಿ ನುಣುಚಿಕೊಳ್ಳುತ್ತಿದೆ. ಆದರೆ, ಇದಕ್ಕೆ ನಿಜವಾದ ಕಾರಣ ಏನೆಂಬುದು ಇದೀಗ ಬಹಿರಂಗಗೊಂಡಿದೆ.
ಜೂ.15ರ ರಾತ್ರಿ ಗಲ್ವಾನ್ ಕಣಿವೆಯಲ್ಲಿ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಪಾಲ್ಗೊಂಡಿದ್ದು ಚೀನಾದ ಬೆರಳೆಣಿಕೆಯ ಯೋಧರು ಮಾತ್ರ. ಹಾಗಾದರೆ, ಭಾರತೀಯ ಯೋಧರೊಂದಿಗೆ ಘರ್ಷಣೆ ಮಾಡಿದವರು ಯಾರು? ಭಾರತೀಯ ಯೋಧರೊಂದಿಗೆ ಘರ್ಷಣೆಗೆ ಇಳಿದವರು ಚೀನಾದ ಪರ್ವತಾರೋಹಿಗಳ ತಂಡ, ಜೂಡೋ ಮತ್ತು ಕರಾಟೆ ಸೇರಿ ಮಿಶ್ರಕದನಕಲೆಗಳನ್ನು ಬಲ್ಲ ಕಲಿಗಳು ಈ ಘರ್ಷಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಚೀನಾದ ಮಿಲಿಟರಿ ದೈನಿಕ ಚೈನಾ ನ್ಯಾಷನಲ್ ಡಿಫೆನ್ಸ್ ಪತ್ರಿಕೆ ಈ ಕುರಿತು ವರದಿ ಮಾಡಿದೆ. ಇಂಥ ಘರ್ಷಣೆಯಲ್ಲಿ ಭಾಗಿಯಾಗಲೆಂದೇ ಚೀನಾ ಐದು ಹೊಸ ಸಹಾಯಕ ಸೇನಾಪಡೆಗಳ ಡಿವಿಜನ್ ಅನ್ನು ಗಲ್ವಾನ್ ಕಣಿವೆಗೆ ಕಳುಹಿಸಿತ್ತು. ಮೌಂಟ್ ಎವರೆಸ್ಟ್ ಒಲಿಂಪಿಕ್ ಜ್ಯೋತಿ ರಿಲೇ ತಂಡದ ಸದಸ್ಯರು ಮತ್ತು ಮಿಶ್ರ ಕದನಕಲೆಗಳ ಕ್ಲಬ್ನ ಹಲವು ಕದನಕಲಿಗಳು ಈ ಡಿವಿಜನ್ಗಳಲ್ಲಿ ಇದ್ದರು. ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರ ಬದಲು ಗಲ್ವಾನ್ ಕಣಿವೆ ಘರ್ಷಣೆಯಲ್ಲಿ ಪಾಲ್ಗೊಳ್ಳಲೆಂದೇ ಇವರೆಲ್ಲರನ್ನೂ ಜೂ.15ಕ್ಕೆ ಟಿಬೆಟ್ ರಾಜಧಾನಿ ಲ್ಹಾಸಾಕ್ಕೆ ಕಳುಹಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ತಮ್ಮ ಸೇನಾಪಡೆಯ ಈ ಕೃತ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಟಿಬೆಟ್ ಕಮಾಂಡರ್ ವ್ಯಾಂಕ್ ಹೈಜಿಯಾಂಗ್, ಫೈಟ್ ಕ್ಲಬ್ನ ಕದನಕಲಿಗಳನ್ನು ಯೋಧರಿಗೆ ಪರ್ಯಾಯವಾಗಿ ಬಳಸಿಕೊಳ್ಳುವುದರಿಂದ, ಸೇನಾಪಡೆಗೆ ಹೆಚ್ಚುವರಿ ಶಕ್ತಿ ಲಭಿಸಿದಂತಾಗುತ್ತದೆ. ಎಂಥ ಪರಿಸ್ಥಿತಿಗೆ ಬೇಕಾದರೂ ತ್ವರಿತವಾಗಿ ಸ್ಪಂದಿಸುವ ಸಾಮರ್ಥ್ಯ ಇವರಿಗೆ ಇರುವುದರಿಂದ, ವೈರಿಗಳನ್ನು ಹಣಿಯಲು ಸುಲಭವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಭಾರತೀಯ ಯೋಧರೊಂದಿಗಿನ ಘರ್ಷಣೆಯಲ್ಲಿ ಸತ್ತವರಲ್ಲಿ ಪರ್ವತಾರೋಹಿಗಳು ಮತ್ತು ಮಿಶ್ರಕದನ ಕಲೆಗಳ ಕಲಿಗಳು ಹೆಚ್ಚಿನವರಾಗಿದ್ದಾರೆ. ಬೆರಳೆಣಿಕೆಯ ಯೋಧರು ಸತ್ತಿದ್ದಾರೆ. ಹಾಗಾಗಿ ಜಾಗತಿಕವಾಗಿ ತಾನು ನೈತಿಕವಾಗಿ ಬೆತ್ತಲಾಗುವ ಭೀತಿಯಿಂದ ಚೀನಾ ಗಲ್ವಾನ್ ಘರ್ಷಣೆಯಲ್ಲಿ ಮಡಿದ ಯೋಧರ ಬಗ್ಗೆ ನಿಖರ ಮಾಹಿತಿ ನೀಡಲು ನಿರಾಕರಿಸುತ್ತಿದೆ ಎನ್ನಲಾಗಿದೆ.
ನಾಯಿಮರಿ ಹೊಟ್ಟೆಯಲ್ಲಿ ಎರಡು ವಜ್ರದ ಹರಳುಗಳ ಜತೆ ಇನ್ನೂ ಏನೇನೋ ವಸ್ತುಗಳು ಇದ್ದವು…!