ತುಮಕೂರು: ಮೂಡಲ್ ಕುಣಿಗಲ್ ಕೆರೆ ಅಂಗಳದಲ್ಲಿ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ಬಿಗ್ಫೈಟ್ ಕಾಣಿಸುತ್ತಿರುವ ಕಣದಲ್ಲಿ ಕುಣಿಗಲ್ ಅಶ್ವವನ್ನು ಯಾರು ಏರಲಿದ್ದಾರೆ ಎಂಬ ಕುತೂಹಲವಿದೆ.
ಹಾಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ಐದು ವರ್ಷ ಶಾಸಕರಾಗಿ ಕೆಲಸ ಮಾಡಿದ್ದರೂ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿಯೇ ಮತದಾರರಿಗೆ ಕುಕ್ಕರ್ ಹಂಚಿಕೆ ಜತೆಗೆ ತೀರ್ಥ ಕ್ಷೇತ್ರಗಳಿಗೆ ಪ್ರವಾಸ ಭಾಗ್ಯ ಕರುಣಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಜೆಡಿಎಸ್ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ 80 ವರ್ಷದ ಹಿರಿಯ ರಾಜಕಾರಣಿ ಡಿ.ನಾಗರಾಜಯ್ಯ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರೂ ಕ್ಷೇತ್ರದ ಮತದಾರರಿಗೆ ಕೊನೆಯ ಕ್ಷಣದವರೆಗೂ ಡಿಎನ್ ಕುಟುಂಬದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಉಳಿದಿರಲಿದೆ.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ಉದ್ದೇಶದಿಂದಲೇ ಕಾಂಗ್ರೆಸ್ಗೆ ಗುಡ್ಬೈ ಹೇಳಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಆರಂಭಿಸಿರುವುದು ಕುಣಿಗಲ್ ರಾಜಕೀಯದ ಹೊಸ ಬೆಳವಣಿಗೆ ಎನಿಸಿದ್ದರೂ ಟಿಕೆಟ್ಗಾಗಿ ಡಿ.ಕೃಷ್ಣಕುಮಾರ್, ಎಚ್.ಡಿ.ರಾಜೇಶ್ಗೌಡ ಅವರ ಪೈಪೋಟಿ ಎದುರಿಸಬೇಕಿದೆ.
ಸಹೋದರ ಸಂಬಂಧಿ ಸ್ಥಳೀಯ ಶಾಸಕ ಎಂಬ ಕಾರಣಕ್ಕೆ ಡಿಕೆ ಬ್ರದರ್ಸ್ಗೆ ಕ್ಷೇತ್ರದ ಮೇಲೆ ವಿಶೇಷ ಆಸಕ್ತಿಯಿದೆಯಾದರೂ ಅವರಿಗಿದ್ದ ಕ್ಷೇತ್ರದ ಮೇಲಿನ ಹಿಡಿತವನ್ನೇ ಎಸ್ಪಿಎಂ ಪಕ್ಷಾಂತರ ಅಲುಗಾಡಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿರುವ ಕ್ಷೇತ್ರಕ್ಕೆ ಸಂಸದ ಡಿ.ಕೆ.ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಟ್ಟ ಬಳಿಕ ಇಲ್ಲಿನ ರಾಜಕೀಯ ಶೈಲಿಯೇ ಬದಲಾಗಿದೆ.
ವೈ.ಕೆ.ರಾಮಯ್ಯ, ಹುಚ್ಚಮಾಸ್ತಿಗೌಡ ಅವರಂತಹ ಮೇರು ನಾಯಕತ್ವ ಕಂಡಿರುವ ತಾಲೂಕಿನಲ್ಲಿ ಜಾತಿವಾರು, ವ್ಯಕ್ತಿನಿಷ್ಠ ಆಧಾರಿತ ಚುನಾವಣೆ ನಡೆದಿದೆಯಷ್ಟೇ ಆದರೂ, 2018ರ ಚುನಾವಣೆ ನಂತರ ಕ್ಷೇತ್ರದಲ್ಲಿ ಹಣಬಲ, ತೋಳ್ಬಲದ ಮೇಲಾಟ ಹೆಚ್ಚಾಗಿದ್ದು ಜನರು ರೋಸಿ ಹೋಗಿದ್ದಾರೆ.
ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡಗೆ 2013ರಲ್ಲಿ ಟಿಕೆಟ್ ತಪ್ಪಿಸಿ ಸಂಬಂಧಿ ಡಾ.ಎಚ್.ಡಿ.ರಂಗನಾಥ್ ಅವರನ್ನು ಕಣಕ್ಕಿಳಿಸಿ 2018ರಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಡಿಕೆ ಬ್ರದರ್ಸ್ಗೆ ಈ ಕ್ಷೇತ್ರ ಪ್ರತಿಷ್ಠೆಯಾಗಿದೆ. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧೆಗೆ ಅವಕಾಶ ನೀಡದೆ ಎಸ್ಪಿಎಂ ಪಕ್ಷ ಬಿಡುವಂತೆ ಮಾಡಿದ್ದಾರೆ ಎಂಬ ದೂರನ್ನು ಈಗ ಹೊರಿಸಲಾಗಿದೆ.
‘ಭಿನ್ನಮತ’ದ ಸುಳಿಗೆ ಕಾಂಗ್ರೆಸ್: ಬಿ.ಬಿ.ರಾಮಸ್ವಾಮಿಗೌಡ ಈ ಚುನಾವಣೆಯಲ್ಲಿಯೂ ಕೈ ಟಿಕೆಟ್ ಬಯಸಿರುವುದು ಮತ್ತೊಮ್ಮೆ ಕಾಂಗ್ರೆಸ್ ‘ಭಿನ್ನಮತ’ದ ಸುಳಿಗೆ ಸಿಲುಕಿದೆ. ಚುನಾವಣಾ ತಂತ್ರಗಾರಿಕೆ ಬಲ್ಲ ಡಿಕೆ ಸಹೋದರರಿಗೆ ಈ ಬಂಡಾಯ ಮೆಟ್ಟಿನಿಲ್ಲುವ ಶಕ್ತಿಯಿದೆ. ಆದರೆ, ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದ ಎಸ್ಪಿಎಂ ಬಜೆಪಿಯಿಂದ ಸ್ಪರ್ಧಿಸಿದರೆ ಅದರ ಪರಿಣಾಮ ತಡೆದುಕೊಳ್ಳುವುದು ಕಷ್ಟವಾಗಬಹುದು.
ಡಿ.ನಾಗರಾಜಯ್ಯ ಮತ್ತು ಅವರ ಮಕ್ಕಳು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ಡಿಕೆ ಸಹೋದರರ ವಿರುದ್ಧ ತೊಡೆತಟ್ಟಿದ್ದಾರೆ. ಕೊನೆಯ ಕ್ಷಣದ ಇತರ ಪಕ್ಷಗಳಿಂದ ಕಣದಲ್ಲಿರುವ ಅಭ್ಯರ್ಥಿಗಳಿಗೆ ಅನುಗುಣವಾಗಿ ಜೆಡಿಎಸ್ ಅಭ್ಯರ್ಥಿ ಬದಲಾಗುವ ಸಾಧ್ಯತೆಯಿದ್ದು, ಡಿಎನ್ ಕುಟುಂಬದಲ್ಲಿಯೇ ಮತ್ತೊಬ್ಬರು ಕಣಕ್ಕಿಳಿಯುವುದು ಖಚಿತ. ಸದ್ಯಕ್ಕಂತೂ ನಾಗರಾಜಯ್ಯ ಅವರೇ ಅಭ್ಯರ್ಥಿ ಎಂದು ಜೆಡಿಎಸ್ ವರಿಷ್ಠರು ಘೋಷಿಸಿದ್ದಾರೆ. ಕೆಆರ್ಎಸ್ ಪಕ್ಷದಿಂದ ರಘು ಜಾಣಗೆರೆ ಸೇರಿ ಮತ್ತಷ್ಟು ರಾಜಕೀಯ ಪಕ್ಷಗಳಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜಿದ್ದಾಜಿದ್ದಿನ ಕಣ ಎನಿಸಿದೆ.
ಎಸ್ಪಿಎಂಗೆ ಜೆಡಿಎಸ್ ಜತೆಗೂ 2013ರ ನಂಟು! ಡಿ.ಕೆ.ಸಹೋದರರೇ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ್ದು ಎಂದು ಬಿಜೆಪಿಯಿಂದ ಸ್ಪರ್ಧೆಗೆ ಮುಂದಾಗಿರುವ ಎಸ್.ಪಿ.ಮುದ್ದಹನುಮೇಗೌಡಗೆ ತಾಲೂಕಿನಲ್ಲಿ ಜೆಡಿಎಸ್ನಿಂದಲೂ 2013ರಲ್ಲಿ ಅನ್ಯಾಯವಾಗಿದ್ದ ಅಸ್ತ್ರ ಪ್ರಯೋಗವಾಗಲಿದೆ. ಡಿ.ನಾಗರಾಜಯ್ಯ 2013ರ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಪಡೆಯಲು ಅಗ್ನಿಪರೀಕ್ಷೆಯನ್ನೇ ಗೆದ್ದುಬಂದಿದ್ದರು.
ಎಸ್.ಪಿ.ಮುದ್ದಹನುಮೇಗೌಡರಿಗೆ ಜೆಡಿಎಸ್ ಬಿ-ಫಾರಂ ಕೊಟ್ಟಿತ್ತು. ಕೊನೇ ಘಳಿಗೆಯಲ್ಲಿ ನಾಗರಾಜಯ್ಯ ಸಿ-ಫಾರಂ ಪಡೆದು ಗೆದ್ದು ಬಂದಿದ್ದು ಈಗ ಇತಿಹಾಸ. ಕಾಂಗ್ರೆಸ್, ಜೆಡಿಎಸ್ನಲ್ಲಿಯೂ ಟಿಕೆಟ್ ವಂಚಿತರಾಗಿರುವ ಎಸ್ಪಿಎಂ ಪರ ತಾಲೂಕಿನಲ್ಲಿ ಎದ್ದಿರುವ ಅನುಕಂಪದ ಅಲೆಯ ಸವಾಲನ್ನು ಎದುರಿಸುವುದೇ ಎರಡೂ ಪಕ್ಷಗಳಿಗೆ ತಲೆನೋವಾಗಿದೆ.
ಕೃಷ್ಣಕುಮಾರ್, ರಾಜೇಶ್ಗೌಡ ಜಟಾಪಟಿ: ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿರುವ ಡಿ.ಕೃಷ್ಣಕುಮಾರ್ ಹಾಗೂ ಎಚ್.ಡಿ.ರಾಜೇಶ್ಗೌಡ ನಡುವೆ ರಾಜಕೀಯ ಜಟಾಪಟಿ ಗಮನ ಸೆಳೆದಿದೆ. ಇತ್ತೀಚೆಗೆ ಸಿಎಂ ಭಾಗವಹಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ರಾಜೇಶ್ಗೌಡ ವೇದಿಕೆಗೆ ಬರದಂತೆ ತಡೆಯಲಾಗಿತ್ತು. ಆ ನಂತರ ಇಬ್ಬರೂ ಪರಸ್ಪರರ ವಿರುದ್ಧ ದೂರುಗಳನ್ನು ಸಲ್ಲಿಸಿದ್ದು ಜಟಾಪಟಿಗೆ ಕಾರಣವಾಗಿದೆ. ಪ್ರಸ್ತುತ ಮೂವರ ನಡುವೆ ಬಿಜೆಪಿಯಲ್ಲಿ ಟಿಕೆಟ್ಗೆ ಬಿಗ್ೈಟ್ ಇದೆ, ಯಾರಿಗೆ ಟಿಕೆಟ್ ಕೊಟ್ಟರೂ ಉಳಿದವರ ಬಂಡಾಯ ಅಲ್ಲಗಳೆಯುವಂತಿಲ್ಲ.
ಒಟ್ಟು ಮತದಾರರು: 193630
ಪುರುಷರು: 97735
ಮಹಿಳೆಯರು: 95893
ಇತರ 2
ಜಾತಿವಾರು ಅಂಕಿ, ಅಂಶ(ಅಂದಾಜು)
ಒಕ್ಕಲಿಗರು 85000
ಕುರುಬರು 8000
ಪರಿಶಿಷ್ಟ ಜಾತಿ 28000
ಲಿಂಗಾಯತ 7000
ಪರಿಶಿಷ್ಟ ಪಂಗಡ 2400
ಮುಸ್ಲಿಮರು 18000
ಇತರೆ 45230
2018ರ ಚುನಾವಣೆ ಲಿತಾಂಶ
ಅಭ್ಯರ್ಥಿ ಪಕ್ಷ ಪಡೆದ ಮತ
ಡಾ.ರಂಗನಾಥ್ ಕಾಂಗ್ರೆಸ್ 58697
ಡಿ.ಕೃಷ್ಣಕುಮಾರ್ ಬಿಜೆಪಿ 53097
ಡಿ.ನಾಗರಾಜಯ್ಯ ಜೆಡಿಎಸ್ 44476
ಗೆಲುವಿನ ಅಂತರ 5600
2013ರ ಚುನಾವಣೆ ಲಿತಾಂಶ
ಅಭ್ಯರ್ಥಿ ಪಕ್ಷ ಪಡೆದ ಮತ
ಡಿ.ನಾಗರಾಜಯ್ಯ ಜೆಡಿಎಸ್ 44575
ಡಿ.ಕೃಷ್ಣಕುಮಾರ್ ಬಿಜೆಪಿ 34943
ಬಿ.ಬಿ.ರಾಮಸ್ವಾಮಿಗೌಡ ಕಾಂಗ್ರೆಸ್ 33918
ಸಿ.ಎಂ.ರವಿಕಿರಣ್ ಬಂಡಾಯ ಕಾಂಗ್ರೆಸ್ 24604