ನವದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದು, ಆಯಾ ರಾಜ್ಯಗಳಲ್ಲಿನ ಕರೊನಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಇಂದು ಪಿಎಂ ಮತ್ತು ಎಲ್ಲ ರಾಜ್ಯಗಳ ಸಿಎಂಗಳ ನಡುವೆ ಸಂವಾದ ನಡೆದ ಬಳಿಕವಷ್ಟೇ ಲಾಕ್ಡೌನ್ ಅವಧಿ ಮುಂದುವರಿಯಲಿದೆಯಾ, ಎಷ್ಟುದಿನ ಇರುತ್ತದೆ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಯುತ್ತಿರುವ ಸಂವಾದದಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿಗಳಲ್ಲಿ ಬಹುತೇಕರು ಲಾಕ್ಡೌನ್ ಅವಧಿ ವಿಸ್ತರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಅದನ್ನೇ ಒತ್ತಾಯಿಸಿದ್ದಾರೆ.
ಈಗಾಗಲೇ ಒಂದೊಂದೇ ರಾಜ್ಯಗಳು ಲಾಕ್ಡೌನ್ ಅವಧಿಯನ್ನು ವಿಸ್ತರಿಸಿಕೊಳ್ಳುತ್ತಿವೆ. ಆದರೆ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಬೇಕು. ಇಡೀ ಭಾರತದ ಲಾಕ್ಡೌನ್ ಅವಧಿ ಮುಂದುವರಿಸಬೇಕು. ಆಯಾ ರಾಜ್ಯಗಳು ತಮಗೆ ಬೇಕಾದಂತೆ ವಿಸ್ತರಿಸಿಕೊಳ್ಳುವುದರಿಂದ ಕರೊನಾವನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಲು ಸಾಧ್ಯವಿಲ್ಲ. ಹಾಗಾಗಿ ಒಟ್ಟಾರೆ ಲಾಕ್ಡೌನ್ ಮುಂದುವರಿಸಿ ಎಂದು ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿಯವರ ಬಳಿ ಸಂವಾದದಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ರೈಲ್ವೆ, ರಸ್ತೆ ಸೇರಿ ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದರೆ ಮಾತ್ರ ಲಾಕ್ಡೌನ್ ಪರಿಣಾಮಕಾರಿಯಾಗಲು ಸಾಧ್ಯ. ಕೆಲವೇ ರಾಜ್ಯಗಳು ನಿರ್ಧಾರ ತೆಗೆದುಕೊಂಡರೆ ಆಗುವುದಿಲ್ಲ ಎಂದು ಕ್ರೇಜಿವಾಲ್ ನರೇಂದ್ರ ಮೋದಿಯವರ ಬಳಿ ಹೇಳಿದ್ದಾರೆ.
ಸದ್ಯ ದೆಹಲಿ ಕರೊನಾ ವೈರಸ್ ಪ್ರಕರಣದಲ್ಲಿ ಮೂರನೇ ಸ್ಥಾನದಲ್ಲಿ ಇದೆ.(ಏಜೆನ್ಸೀಸ್)