ಹುಲಸೂರು: ಮೈಸೂರ ರಾಜ್ಯ ಕರ್ನಾಟಕವೆಂದು ಮರುನಾಮಕರಣವಾಗಿ ೫೦ ವರ್ಷ ಪೂರ್ಣಗೊಂಡಿದ್ದರಿಂದ ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆಸುವ ಉದ್ದೇಶದಿಂದ ಆರಂಭಿಸಿರುವ ಕರ್ನಾಟಕ ಸಂಭ್ರಮ-೫೦ರ ಕನ್ನಡ ಜ್ಯೋತಿ ರಥಯಾತ್ರೆಗೆ ಪಟ್ಟಣದಲ್ಲಿ ಮಂಗಳವಾರ ಅದ್ದೂರಿ ಸ್ವಾಗತ ಕೋರಲಾಯಿತು.
ಶಾಸಕ ಶರಣು ಸಲಗರ, ತಹಸೀಲ್ದಾರ್ ಶಿವಾನಂದ ಮೇತ್ರೆ ಸೇರಿ ಗಣ್ಯರು ಡೊಳ್ಳು ಬಾರಿಸಿ ರಥಯಾತ್ರೆ ಮೆರವಣಿಗೆ ಚಾಲನೆ ನೀಡಿದರು.
ವಿವಿಧ ಶಾಲಾ ಮಕ್ಕಳಿಂದ ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆಯ ಮೂಲಕ ಗುರು ಬಸವೇಶ್ವರ ಸಂಸ್ಥಾನ ಮಠ , ಸಂತ ರಘುನಾಥ ಮಹಾರಾಜ ಸಂಸ್ಥಾನ ಮಠ , ಗಾಂಧಿ ವೃತ್ತ ದಿಂದ ವಿವಿಧ ಬಡಾವಣೆಗಳ ಮೂಲಕ ಗುರು ಬಸವೇಶ್ವರ ಸಂಸ್ಥಾನ ಮಠದವರೆಗೆ ಕರೆತರಲಾಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆಹಾಕಿದರು. ಭುವನೇಶ್ವರಿ ದೇವಿಗೆ ಜಯವಾಗಲಿ ಸೇರಿ ಇನ್ನಿತರ ಘೋಷಣೆ ಮೊಳಗಿದವು. ಡೊಳ್ಳು ಕಣಿತ, ಕೋಲಾಟ ಗಮನ ಸೆಳೆಯಿತು.
ಎಂ.ಕೆ ಪಾರಶೆಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಕಾಂಬಳೆ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ಕೆಲಸ ಎಲ್ಲರ ಜವಾಬ್ದಾರಿಯಾಗಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಕರ್ನಾಟಕ ಇತಿಹಾಸ ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಪ್ರಾಸ್ತಾವಿಕ ಮಾತನಾಡಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಪ್ರಭು ದೇವರು, ಲತಾ ಹಾರಕೂಡೆ , ಸುದೀರ ಕಾಡಾದಿ, ಮಹದೇವ ಜಮ್ಮು, ಬಿಇಒ ಚಂದ್ರಶೇಖರಗೌಡ ಪಾಟೀಲ್, ಶಿವರಾಜ ಖಪಲೆ, ಭೀಮಾಶಂಕರ ಅದೆಪ್ಪ, ಪಿಎಸ್ಐ ನಾಗೇಂದ್ರ, ರಮೇಶ ಸೇರಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.