ರಾಮದುರ್ಗ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ನೇಕಾರರಿಗೆ ಆರ್ಥಿಕ ನೆರವು ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ನೇಕಾರರ ವೇದಿಕೆಯಿಂದ ತಹಸೀಲ್ದಾರ್ ಮೂಲಕ ಶನಿವಾರ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹಾಗೂ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-19 ನಿಯಂತ್ರಿಸುವ ಸಲುವಾಗಿ ಲಾಕ್ಡೌನ್ ಘೋಷಿಸಲಾಗಿದೆ. ಪರಿಣಾಮ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೇಕಾರರು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ತುತ್ತು ಅನ್ನಕ್ಕಾಗಿ ಇತರರನ್ನು ಬೇಡುವ ಸ್ಥಿತಿಗೆ ಸಿಲುಕಿದ್ದಾರೆ. ಉಭಯ ಸರ್ಕಾರಗಳು ಕಷ್ಟಕ್ಕೆ ಸಿಲುಕಿದ ನೇಕಾರರ ನೆರವಿಗೆ ಶೀಘ್ರ ಮುಂದಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಸೀರೆ ಖರೀದಿಸಲಿ: ನೇಕಾರರು ನೇಯ್ದ ಸೀರೆ, ಕಚ್ಚಾ ಸಾಮಗ್ರಿ ಸಾಗಣೆಗೆ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ನೇಕಾರರು ಉತ್ಪಾದಿಸಿದ ಸೀರೆಗಳನ್ನು ಖರೀದಿಸಬೇಕು. ರಾಜ್ಯದ ಬಡ ನೇಕಾರರಿಗೆ ಸರ್ಕಾರದ ವತಿಯಿಂದ ಜವಳಿ ಇಲಾಖೆ ಮೂಲಕ ಪ್ರತಿ ತಿಂಗಳು 5,000 ರೂ. ಧನ ಸಹಾಯ ನೀಡಬೇಕು.
ಲಾಕ್ಡೌನ್ನಿಂದಾಗಿ ಉಂಟಾದ ನಷ್ಟಕ್ಕೆ ಪ್ರತಿಯಾಗಿ ಪರಿಹಾರ ರೂಪದಲ್ಲಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಮಲ್ಲಣ್ಣ ಯಾದವಾಡ, ತಾಲೂಕು ನೇಕಾರರ ವೇದಿಕೆ ಅಧ್ಯಕ್ಷ ಶಂಕ್ರಣ್ಣ ಮುರುಡಿ, ವಿಠ್ಠಲ ಮುರುಡಿ, ಏಕನಾಥ ಕೊಣ್ಣೂರ, ಶಂಕರ ಬೆನ್ನೂರ, ಪ್ರಹ್ಲಾದ್ ಇದ್ದರು.
ಬೈಲಹೊಂಗಲ ವರದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು, ಅಂಗನವಾಡಿ, ಆಶಾ, ಅಕ್ಷರ ದಾಸೋಹ ಕಾರ್ಯಕರ್ತೆಯರು ತಾಲೂಕಿನ ಅಮಟೂರ ಗ್ರಾಮ ಪಂಚಾಯಿತಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದರು.
ರುದ್ರಗೌಡ ಪಾಟೀಲ ಮಾತನಾಡಿ, ಸರ್ಕಾರ ಆಶಾ, ಅಂಗನವಾಡಿ, ಗ್ರಾಪಂ ಸಿಬ್ಬಂದಿ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗುತ್ತಿದೆ.
ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಿಡಿಒ ಎಸ್.ಎಂ. ಹಾರೂಗೊಪ್ಪ, ಎಲ್.ಎಂ.ವಗ್ಗರ, ಪಿ.ಎಂ.ಕಮ್ಮಾರ, ಮಹಾಂತೇಶ ಮುರಗೋಡ, ವರ್ಧಮಾನ ಗಂಗಣ್ಣವರ, ಬಸವರಾಜ ಪೂಜೇರಿ, ಬಸವ್ವ ದೊಡಮನಿ ಇದ್ದರು.