ಬೆಂಗಳೂರು: ರಾಜಧಾನಿಯ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಅದರಲ್ಲೂ ಯಶವಂತಪುರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಜನರು ಟ್ಯಾಂಕರ್ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಯಶವಂತಪುರದ ಸಪ್ತಗಿರಿ ಬಡಾವಣೆಯ ವಾರ್ಡ್ ಸಂಖ್ಯೆ 40 ವ್ಯಾಪ್ತಿಯಲ್ಲಿ ಕೊರೆಯಿಸಲಾಗಿದ್ದ 18 ಕೊಳವೆಬಾವಿಗಳಲ್ಲಿ 10ರಲ್ಲಿ ನೀರು ಸಿಕ್ಕಿರಲಿಲ್ಲ. ಅಂತರ್ಜಲ ಮಟ್ಟ ಕುಸಿತದಿಂದ 8 ಕೊಳವೆಬಾವಿಗಳು ಸಂಪೂರ್ಣ ಬತ್ತಿಹೋಗಿವೆ. ಪರಿಣಾಮ, ಕಳೆದ ಐದು ತಿಂಗಳಿನಿಂದ ನೀರಿಲ್ಲದಂತಾಗಿದೆ ಎಂದು ಸ್ಥಳಿಯರು ಅಳಲು ತೋಡಿಕೊಂಡಿದ್ದಾರೆ.
ಸಪ್ತಗಿರಿ ಬಡಾವಣೆಗೆ ಬೋರ್ವೆಲ್ನಿಂದ ನೀರು ಪೂರೈಕೆಯಾಗುತ್ತಿತ್ತು. ಬೇಸಿಗೆಗೂ ಮುನ್ನವೇ ಕೊಳವೆಬಾವಿಗಳು ಬತ್ತಿ ಹೋಗಿರುವುದರಿಂದ ನಿವಾಸಿಗಳು ಸಂಕಷ್ಟು ಅನುಭವಿಸುತ್ತಿದ್ದಾರೆ. ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬೋರ್ವೆಲ್ಗಳಲ್ಲಿ ನೀರು ಬತ್ತಿಹೋದ ಬಳಿಕ 600-800 ರೂ. ನೀಡಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ. ಫೋನ್ ಮಾಡಿ ತಿಳಿಸಿದರೆ, ಮೂರ್ನಾಲ್ಕು ದಿನ ಬಿಟ್ಟು ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಸ್ಥಳಿಯ ನಿವಾಸಿಗಳು ಅಲವತ್ತುಕೊಂಡಿದ್ದಾರೆ.
ನೀರಿನ ಘಟಕದಲ್ಲೂ ಇಲ್ಲ
ಸುವರ್ಣನಗರ, ಎಚ್ಎಂಟಿ ಬಡವಾಣೆ, ನಾಗಸಂದ್ರ ಭಾಗದಲ್ಲಿ ಕೆಲವು ಕುಡಿಯುವ ನೀರಿನ ಟಕಗಳಿವೆ. ನೀರು ತರೋಣವೆಂದು ಹೋದರೆ ಅಲ್ಲೂ ನೀರಿಲ್ಲ ಎಂಬ ಬೋರ್ಡ್ ಕಾಣಿಸುತ್ತಿದೆ. ತಾಸುಗಟ್ಟಲೆ ಸರತಿ ಸಾಲಲ್ಲಿ ನಿಂತರೂ ನೀರು ಸಿಗದ ಪರಿಸ್ಥಿತಿ ಎದುರಾಗಿದೆ ಎಂದು ಜನರು ಸಮಸ್ಯೆ ಹೇಳಿಕೊಂಡಿದ್ದಾರೆ.
ಕೊಳವೆಬಾವಿ ಬತ್ತಿ ಹೋದ ಪರಿಣಾಮ ಕಳೆದ ಐದು ತಿಂಗಳಿನಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ನಮ್ಮ ವಾರ್ಡ್ಗೆ ಕಾವೇರಿ ನೀರು ಸರಬರಾಜಿಗೆ ಬೇಕಾದ ಪೈಪ್ಲೈನ್ ಅಳವಡಿಕೆ ಕಾಮಗಾರಿ ಸಂಪೂರ್ಣವಾಗಿದೆ. ಆದಷ್ಟು ಬೇಗ ನೀರು ಪೂರೈಕೆಯಾದರೆ ಟ್ಯಾಂಕರ್ ನೀರಿನ ಮೊರೆ ಹೋಗುವುದು ತಪ್ಪುತ್ತದೆ.
-ಎಚ್.ರುದ್ರೇಶ್, ಸಪ್ತಗಿರಿ ಬಡಾವಣೆ ನಿವಾಸಿ