ಮಲೇಬೆನ್ನೂರು: ಮಳೆಗಾಲದಲ್ಲಿ ತುಂಗಭದ್ರಾ ನದಿ ಪ್ರವಾಹದಿಂದಾಗಿ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮಕ್ಕೆ ಜಲದಿಗಂಧನ ಸಮಸ್ಯೆ ಉಂಟಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಫತ್ಯಾಪುರ ಹಾಗೂ ತುಮ್ಮಿನಕಟ್ಟೆ ರಸ್ತೆಗಳಿಗೆ ಮೇಲ್ಮಟ್ಟದ ಸೇತುವೆ ಅಥವಾ ನದಿಗೆ ತಡೆಗೋಡೆ ನಿರ್ಮಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ.
ಪವಾಡಪುರುಷ ಕರಿಬಸವೇಶ್ವರ ಸ್ವಾಮಿ ಸುಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪ್ರತಿ ಬಾರಿ ತುಂಗಭದ್ರಾ ನದಿ ಪ್ರವಾಹದ ವೇಳೆ ಸ್ಥಳಕ್ಕೆ ಬರುವ ರಾಜಕಾರಣಿಗಳು, ಅಧಿಕಾರಿಗಳು ಸೇತುವೆ ನಿರ್ಮಾಣದ ಬಗ್ಗೆ ನೀಡುತ್ತಿರುವ ಭರವಸೆ ಹುಸಿಯಾಗಿದೆ. ಗ್ರಾಮಸ್ಥರು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಪ್ರವಾಹದ ವೇಳೆ ಬ್ಯಾಂಕ್ ಸಿಬ್ಬಂದಿ, ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಭಕ್ತರು ಸಂಗಾಪುರ , ನಿಟುಪಳ್ಳಿ , ಕುಪ್ಪೇಲೂರು ಮೂಲಕ 10 ಕಿ.ಮೀ ಸುತ್ತು ಬಳಸಿ ಸಂಚರಿಸಬೇಕಾಗುತ್ತಿದೆ . ಸಮಯದ ಜತೆಗೆ ಹಣವೂ ಹೆಚ್ಚು ತಗುಲುತ್ತಿದೆ ಎಂದು ಉಕ್ಕಡಗಾತ್ರಿ ಗ್ರಾಮದ ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.