ಕೊಪ್ಪಳ: ಗ್ರಾಮ ಪಂಚಾಯಿತಿಗೊಂದು ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದ್ದು, ಉಸ್ತುವಾರಿ ವಹಿಸಿಕೊಂಡ ಸಮಿತಿ ಸುಗಮವಾಗಿ ಘಟಕ ನಿರ್ವಹಿಸಬೇಕೆಂದು ತಾಪಂ ಇಒ ದುಂಡಪ್ಪ ತುರಾದಿ ತಿಳಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಘನ ತ್ಯಾಜ್ಯ ನಿರ್ವಹಣಾ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಗ್ರಾಪಂಗೆ ಒಂದರಂತೆ ಘಟಕ ನಿರ್ಮಿಸಲಾಗಿದೆ. ಸ್ವಚ್ಛ ವಾಹಿನಿ ಮೂಲಕ ಪ್ರತಿ ಮನೆ ಕಸ ಸಂಗ್ರಹಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಮಿತಿ ರಚಿಸಿ ತರಬೇತಿ ನೀಡಲಾಗುತ್ತಿದೆ. ಕಸ ಸಂಗ್ರಹಣೆ, ವಿಲೇವಾರಿ ನಿರಂತರ ಪ್ರಕ್ರಿಯೆ. ಯಾವುದೇ ಕಾರಣಕ್ಕೂ ಘಟಕ ಸ್ಥಗಿತವಾಗಬಾರದು ಎಂದರು.
ಸಂಜೀವಿನಿ ಸಂಘಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಸ್ವಚ್ಛ ವಾಹಿನಿಗೆ ಮಹಿಳಾ ಚಾಲಕರನ್ನು ನೇಮಿಸಲಾಗಿದೆ. ಕಸ ಸಂಗ್ರಹಣೆ ವೇಳೆ ಪ್ರತ್ಯೇಕಿಸುವಿಕೆ ಮತ್ತು ವಿಲೇವಾರಿ ಮಾಡುವ ಬಗ್ಗೆ ತರಬೇತಿ ನೀಡಿದ್ದೇವೆ. ಭವಿಷ್ಯದಲ್ಲಿ ಕಸ ವಿಲೇವಾರಿ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಈಗಿನಿಂದಲೇ ವೈಜ್ಞಾನಿಕವಾಗಿ ವಿಲೇವಾರಿ ಮಾಡೋಣ ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕರಾದ ಮಹೇಶ ಎಚ್. ಹಾಗೂ ಹನುಮಂತಗೌಡ ಪೊ.ಪಾ. ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ಸಂಜೀವಿನಿ ಸಂಘದ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟ ಅಧ್ಯಕ್ಷರು, ಮುಖ್ಯ ಬರಹಗಾರರು, ಸ್ವಚ್ಛ ಭಾರತ ಮಿಷನ್ ಸಮಾಲೋಚಕರು, ಎನ್ಆರ್ಎಲ್ಎಂ ಸಂಯೋಜಕರು ಹಾಗು ಸಿಬ್ಬಂದಿಗೆ ತರಬೇತಿ ನೀಡಿದರು.
ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ, ಜಿಪಂ ಸ್ವಚ್ಛ ಭಾರತ ಮಿಷನ್ ಸಮಾಲೋಚಕಿ ಬಸಮ್ಮ ಹುಡೇದ, ರಾಮಣ್ಣ ಬಂಡಿಹಾಳ, ಸಂಜೀವಿನಿ ಯೋಜನೆಯ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್ ಇತರರಿದ್ದರು.