ಕೋಲಾರ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಕೊಡುತ್ತೇವೆ. ಸಮಾಜದಲ್ಲಿ ತಾರತಮ್ಯ ಇರಲು ಬಿಡುವುದಿಲ್ಲ. ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಮಾಡಿದ ನಾವು ಪ್ರತಿಯೊಬ್ಬ ರೈತನಿಗೂ ಕನಿಷ್ಠ ಬೆಂಬಲ ನೀಡುವೆವು, ಸಾಲಮನ್ನಾ ಮಾಡುವೆವು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದರು.
ಮಾಲೂರಿನಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯಗಳನ್ನು ವಿಂಗಡಿಸಿದ್ದೇ ಕೇಂದ್ರ ಸರ್ಕಾರದ ಸಾಧನೆ ಎಂದು ಮೂದಲಿಸಿದರು. ರೈತರ ಸಾಲಮನ್ನಾ ಕೇಳಿದಾಗ ರೈತರನ್ನು ಕೆಡಿಸಬೇಡಿ ಅಂದರು. ಉದ್ಯಮಿಗಳಿಗೆ ಬೆಂಬಲ ನೀಡಬೇಡಿ ಎಂದು ನಾವು ಹೇಳುವುದಿಲ್ಲ. ಆದರೆ ದೇಶವನ್ನು ಕಟ್ಟುವ ಕೆಲಸದಲ್ಲಿ ರೈತರು, ಕಾರ್ಮಿಕರು ಪಾಲ್ಗೊಂಡಿದ್ದಾರೆ ಎಂಬುದನ್ನು ಮರೆಯಬಾರದು ಎಂದರು.
ನಾಯಕನಾದವನಿಗೆ ಪದ್ಧತಿ, ಶಿಸ್ತು ಮುಖ್ಯ. ತಾರತಮ್ಯ ಕಂಡಾಗ ಸರಿಪಡಿಸಲು ಆತ ಮುಂದಾಗಬೇಕು. ಪ್ರಶ್ನೆ ಮಾಡಿದಾಗ ಹಲ್ಲೆ, ಆರೋಪ, ಅವಮಾನ ಆಗಬಹುದು. ಇವೆಲ್ಲ ಒಳ್ಳೆಯ ಕೆಲಸ ಮಾಡುತ್ತಿರುವುದರ ಸೂಚನೆ ಅಂದುಕೊಳ್ಳಿ. ಹೀಗಾಗಿ ಎಂದಿಗೂ ಎದೆಗುಂದಬಾರದು, ಭಯಪಡಬಾರದು. ಒಂದು ಹೆಜ್ಜೆ ಮುಂದಿಡಬೇಕು ಎಂದು ರಾಹುಲ್ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಅಜ್ಜಿಯೊಂದಿಗೆ ಬಂದಿದ್ದೆ
ನಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ಜತೆಗೆ ಕೋಲಾರಿಗೆ ಬಂದಿದ್ದ ನೆನಪು ಇದೆ. ಗಣಿಯ ಸುರಂಗದ ಒಳಗೆ ಹೋಗಿ ಕಾರ್ಮಿಕರ ನಡುವೆ ಆಗ ಮಾತನಾಡಿದ್ದೆ. ಗಣಿಯಲ್ಲಿ ಇಟ್ಟಿಗೆಯನ್ನು ಗಮನಿಸಿದಾಗ ಅನಿಸಿತು, ಕೋಲಾರದ ಭವಿಷ್ಯ ಚಿನ್ನದ ಗಣಿಯಲ್ಲಿ ಇದೆ ಎಂದು ಉದ್ಘರಿಸಿದರು.
ನಮ್ಮ ಅಜ್ಜಿ ಇಂದಿರಾ ಗಾಂಧಿ ಅವರೇ ನನ್ನ ರಾಜಕೀಯ ಗುರು. ಚಿಕ್ಕವನಿರುವಾಗ ನನಗಾಗಿ ಎಷ್ಟೊಂದು ತಯಾರಿ ಮಾಡಿದ್ದಾರೆ ಎಂಬುದು ಈಗ ಅರಿವಾಗಿದೆ. ರಾಜಕಾರಣ ಎಂದರೆ ಚದುರಂಗದ ಆಟ, ಸಾಕಷ್ಟು ಕ್ರಿಯಾ ಯೋಜನೆ, ಬೇರೆ ಬೇರೆ ರೀತಿ ಅಲೋಚನೆ ಮಾಡಬೇಕು. ಈಗಿನ ರಾಜಕೀಯಕ್ಕೂ ಹಿಂದಿನ ರಾಜಕೀಯಕ್ಕೂ ಬಹಳ ವ್ಯತ್ಯಾಸವಿದೆ. ಅವರು ನನಗೆ ಕಲಿಸಿದ ಪಾಠದಿಂದ ರಾಜಕೀಯವನ್ನು ಪೂರ್ತಿ ಅರ್ಥ ಮಾಡಿಕೊಂಡೆ ಎಂದರು.
5 ನ್ಯಾಯ ಗ್ಯಾರಂಟಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಮಾದರಿಯಲ್ಲಿ ದೇಶದ ಮಟ್ಟದಲ್ಲೂ 5 ನ್ಯಾಯ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಅಧಿಕ ಬಹುಮತ ನೀಡಿದರೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ದೇಶದ ಸಂವಿಧಾನ, ಪ್ರಜÁತಂತ್ರವನ್ನು ಉಳಿಸುವುದೇ ಈ ಚುನಾವಣೆಯ ಗುರಿಯಾಗಿದೆ. ಇದರಿಂದಾಗಿ ಮತದಾರರು ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಬೇಕು ಎಂದು ಮನವಿ ಮಾಡಿದರು.
ಗ್ಯಾರಂಟಿ ಕದ್ದ ಮೋದಿ
ಮುಖ್ಯಮಂತ್ರಿ, ಸಚಿವರು ಕೇಳಿದ ಪ್ರಶ್ನೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಲಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ಅಽಕಾರದಿಂದ ತೆಗೆದುಹಾಕಬೇಕು. ಜಿಲ್ಲೆಯು ರೇಷ್ಮೆ, ಹಾಲಿಗೆ ಪ್ರಸಿದ್ಧವಾಗಿದೆ. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಕೆಸಿ ವ್ಯಾಲಿ ಯೋಜನೆ ಜÁರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಸುಳ್ಳು ಹೇಳುವುದೇ ಮೋದಿ ಕೆಲಸ. ಈಗ ಗ್ಯಾರಂಟಿಗಳ ಬೆನ್ನತ್ತಿದ್ದಾರೆ. ಅವರು ಅದನ್ನು ನಮ್ಮಿಂದ ಕದ್ದಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವೊಬ್ಬರಿಗೂ ಕೆಲಸ ಕೊಡಲಿಲ್ಲ, ಈಗ ಹೇಳಿದ ಗ್ಯಾರಂಟಿಗಳನ್ನು ನೀಡುತ್ತಾರೆಯೇ ಎಂದು ಖರ್ಗೆ ಪ್ರಶ್ನಿಸಿದರು.
- ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಹಿಂದೆ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದರು, ಕೋಮುವಾದಿ ಪಕ್ಷ, ನರೇಂದ್ರ ಮೋದಿ ಮತ್ತೆ ಪ್ರಧಾನಿ ಆದರೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುವುದಾಗಿ ಹೇಳಿದ್ದರು. ಈಗ ಇಬ್ಬರೂ ಬಾಯಿ ಬಾಯಿ ಆಗಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್ ಪತನವಾಗುತ್ತದೆ ಎಂಬ ಭ್ರಮೆಯಲ್ಲಿ ದೇವೇಗೌಡರು ಇದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿಗಳನ್ನು ಅಣಕಿಸಲಾಗಲಿಲ್ಲ
ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಗ್ಯಾರಂಟಿಗಳನ್ನು ಅಣಕಿಸುವುದಾಗಿ ವಿಜಯೇಂದ್ರ ಹೇಳಿದ್ದಾರೆ, ಕುಮಾರಸ್ವಾಮಿ ಅವರು ಹೆಣ್ಣುಮಕ್ಕಳ ಬಗ್ಗೆ ಅವಮಾನವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
- 27 ಎಂಪಿಗಳು ಬರಿ ಹೋಳು
ಬಿಜೆಪಿ-ಜೆಡಿಎಸ್ನಿಂದ 27 ಮಂದಿ ಎಂಪಿಗಳು ಗೆದ್ದಿದ್ದರು, ಮೋದಿ ಸರ್ವಾಽಕಾರಕ್ಕೆ ತಲೆ ಭಾಗಿ ನಾಲಾಯಕ್ ಎನಿಸಿಕೊಂಡಿz್ದÁರೆ. ರಾಜ್ಯದ ಪರವಾಗಿ ಹೋರಾಟ ಮಾಡಿದ್ದು ಡಿ.ಕೆ.ಸುರೇಶ್ ಮಾತ್ರ. 27 ಮಂದಿ ಕೈಲಾಗದವರು ಬಿಜೆಪಿಗೆ ಗುಲಾಮರಾಗಿದ್ದರು. ಅವರು ಬರೀ ಹೋಳು, ರಾಜ್ಯಕ್ಕೆ ಗೋಳಾಗಿದ್ದಾರೆ, ಅವರನ್ನು ಮನೆಗೆ ಕಳುಹಿಸಿ, ನ್ಯಾಯಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು. - ಬಿಜೆಪಿ ಎಂಪಿ ಆಯ್ಕೆ ಆಕಸ್ಮಿಕ
ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಇತಿಹಾಸ ಇದೆ, ಎರಡು ಬಾರಿ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿ, ಜೆಡಿಎಸ್ ಆಕಸ್ಮಿಕವಾಗಿ ಗೆದಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಇತಿಹಾಸ ಮರು ಸೃಷ್ಟಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಕೋರಿದರು.
ಮೋದಿ ಅವರು ಪ್ರತಿ ಕಡೆಯು ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಎನ್ಡಿಎ ಸಭೆಯಲ್ಲಿ 30 ನಿಮಿಷ ಭಾಷಣ ಮಾಡಿ ಆ ಪೈಕಿ 10 ನಿಮಿಷ ಸಾಧನೆಗಳ ಬಗ್ಗೆ ಮಾತನಾಡಿದರು, 20 ನಿಮಿಷ ಕಾಂಗ್ರೆಸನ್ನು ಟೀಕಿಸಿದರು. ಆದರೆ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಹೇಳಲಿಲ್ಲ. ಬರಗಾಲದಲ್ಲಿ ಏನು ಸಹಾಯ ಮಾಡಿದ್ದೀರಿ, ಪ್ರವಾಹ ಬಂದಾಗ ಎಷ್ಟು ನೆರವು ನೀಡಿದಿರಿ, ನರೇಗಾ ಹಣ ಸಮರ್ಪಕವಾಗಿ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಅಧ್ಯಕ್ಷ