ಉಳ್ಳಾಗಡ್ಡಿ-ಖಾನಾಪುರ: ಕರೊನಾ ಸೋಂಕು ವಿಶ್ವದೆಲ್ಲೆಡೆ ಒಕ್ಕರಿಸಿ ಜನತೆಯ ಬದುಕು ಹಾಗೂ ನೆಮ್ಮದಿ ಕಸಿದಿದೆ ಎನ್ನುವುದು ಒಂದೆಡೆಯಾದರೆ, ಕರೊನಾದ ಹೊಡೆತಕ್ಕೆ ಲೆಕ್ಕವಿಲ್ಲದಷ್ಟು ಜನ ತತ್ತರಿಸಿ ರೋಸಿ ಹೋಗುವಂತಾಗಿದೆ. ಇಂಥ ಭೀಕರ ಸ್ಥಿತಿ ಮಧ್ಯೆ ಹಳ್ಳಿಗಳಲ್ಲಿ ಸಂಪೂರ್ಣ ಬಂದ್ ಘೋಷಣೆಯಾಗಿದೆ. ಹಾಗಾಗಿ ಗ್ರಾಮೀಣ ಜನರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 108 ಹಳ್ಳಿಗಳು ಸೇರಿ ಪ್ರಮುಖ ಗ್ರಾಮಗಳಿವೆ. ಈ ವ್ಯಾಪ್ತಿಯಲ್ಲಿ ಸುಮಾರು 450 ಕ್ಕೂ ಹೆಚ್ಚು ಕ್ಷೌರಿಕರ ಅಂಗಡಿಗಳಿವೆ. ಈಗ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಲಾಗಿದೆ. ಕ್ಷೌರಿಕರು ಜೀವನ ನಡೆಸುವುದು ಕಷ್ಟವಾಗಿದೆ. ಇಂಥ ಎಲ್ಲ ಸಂಕಷ್ಟಗಳ ಮಧ್ಯೆ ಗ್ರಾಮೀಣ ವಲಯಗಳಲ್ಲಿನ ಮಕ್ಕಳು ಕ್ಷೌರಿಕರಿಲ್ಲದೆ ತಮ್ಮ ತಲೆಕೂದಲು ಕತ್ತರಿಸಲಾಗದೆ ಪರಿತಪಿಸುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯ ಮಧ್ಯೆ ಗ್ರಾಮೀಣ ವಲಯದಲ್ಲಿನ ಪಾಲಕರೇ ತಮ್ಮ ಮಕ್ಕಳ ತಲೆಕೂದಲು ಕಟಿಂಗ್ ಮಾಡುತ್ತಿದ್ದಾರೆ.