ನವದೆಹಲಿ: ಪೊಲೀಸರ ಕೈಗೆ ಸಿಕ್ಕಿಬಿದ್ದರೆ ತನ್ನನ್ನು ಎನ್ಕೌಂಟರ್ ಮಾಡುತ್ತಾರೆ ಎಂಬ ಆತಂಕ ಕುಖ್ಯಾತ ಪಾತಕಿ ವಿಕಾಸ್ ದುಬೆಗೆ ಇತ್ತು. ಆದ್ದರಿಂದಲೇ ಆತ ಕಾನ್ಪುರದಿಂದ ತಪ್ಪಿಸಿಕೊಂಡು ನೋಯ್ಡಾಕ್ಕೆ ತೆರಳಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ನೋಯ್ಡಾದಿಂದ ಪೊಲೀಸರಿಗೆ ಹಲವು ಬಾರಿ ಕರೆ ಮಾಡಿದ್ದ ವಿಕಾಸ್, ನಾನು ಶರಣಾಗುತ್ತೇನೆ. ಆದರೆ ನನ್ನನ್ನು ಏನೂ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ಗೂ ಮುನ್ನ ಸ್ಥಳದಲ್ಲಿ ನಡೆದಿತ್ತು ಭಾರಿ ಹೈಡ್ರಾಮ!
ಜುಲೈ 5 ಮತ್ತು ಜುಲೈ 6ರಂದು ಆತ ನೋಯ್ಡಾದ ಪ್ರಖ್ಯಾತ ಕ್ರಿಮಿನಲ್ ಲಾಯರ್ ಒಬ್ಬರ ಮನೆಯಲ್ಲಿ ಇದ್ದ. ಅವರ ಮೂಲಕ ನೋಯ್ಡಾ ಪೊಲೀಸರ ಬಳಿ ಶರಣಾಗುವ ಪ್ರಸ್ತಾಪ ಕಳಿಸಿದ್ದ. ಆದರೆ ಈ ಪ್ರಕ್ರಿಯೆ ನಡೆಸಲು ನೋಯ್ಡಾ ಪೊಲೀಸರು ನಿರಾಕರಿಸಿದರು. ಬಳಿಕ ಇದೇ ಪ್ರಸ್ತಾಪದೊಂದಿಗೆ ದೆಹಲಿ ಪೊಲೀಸರನ್ನೂ ಸಂಪರ್ಕಿಸಿದ್ದ. ಆದರೆ, ಅವರು ಕೂಡ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಆತ ಅವರ ಮನೆಯಿಂದ ಹೊರಟಿದ್ದ ಎಂದು ಹೇಳಲಾಗಿದೆ.
ಆನಂತರ ದುಬೆ ರಾಜಸ್ಥಾನದ ಕೋಟಾಕ್ಕೆ ತೆರಳಿದ. ಅಲ್ಲಿ ಕೂಡ ಪೊಲೀಸರ ಎದುರು ಶರಣಾಗತಿಯ ಪ್ರಸ್ತಾಪ ಇರಿಸಿದ. ಅವರೂ ಒಪ್ಪದಿದ್ದಾಗ ಕಾನ್ಪುರದಲ್ಲಿ ವಾಣಿಜ್ಯೋದ್ಯಮಿಯಾಗಿರುವ ಪರಿಚಿತರೊಬ್ಬರ ಸಹೋದರ ಉಜ್ಜೈನ್ನಲ್ಲಿ ಇರುವುದು ಗೊತ್ತಿದ್ದರಿಂದ, ಅವರ ಮೂಲಕ ತಾನು ಉಜ್ಜೈನ್ನಲ್ಲಿರುವ ಸಂಗತಿ ಪೊಲೀಸರಿಗೆ ಸಿಗುವಂತೆ ಮಾಡಿದ್ದ. ಅದರಂತೆ ಮಧ್ಯಪ್ರದೇಶ ಪೊಲೀಸರು ಬರುವ ಸಂದರ್ಭದಲ್ಲಿ ಆತ ಮಹಾಕಾಲ್ ದೇವಸ್ಥಾನದ ಬಳಿ ಇರುವ ರೀತಿ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
‘ಕಾರು ಉರುಳಿದ್ದಲ್ಲ, ಸರ್ಕಾರ ಉರುಳದಿರಲು ಡ್ರಾಮಾ’: ದುಬೆ ಎನ್ಕೌಂಟರ್ಗೆ ಪ್ರತಿಕ್ರಿಯೆ