ಕುಂದಾಪುರ: ಪ್ರಥಮ ನೌಕಾ ಅಭಿಯಾನ ಮೂಲಕ ಪೋರ್ಚುಗೀಸರ ವಿರುದ್ಧ ಶಿವಾಜಿ ವಿಜಯಗಾಥೆ ನೆನಪಿಗೆ ಬಸ್ರೂರಿನಲ್ಲಿ ಗುರುವಾರ ವಿಜಯೋತ್ಸವ ಆಚರಿಸಲಾಯಿತು.
ಛತ್ರಪತಿ ಶಿವಾಜಿ ಅಭಿಮಾನಿ ಬಳಗ, ಬಸ್ರೂರು ಮತ್ತು ಭಾರತೀಯ ಇತಿಹಾಸ ಸಂಕಲನ ಸಮಿತಿ ಜಂಟಿಯಾಗಿ ಬಸ್ರೂರು ನಿವೇದಿತಾ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು. ನಿವೇದಿತಾ ಪ್ರೌಢ ಶಾಲಾ ಶಿಕ್ಷಕರಾದ ಪ್ರದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕ ಗುರುರಾಜ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಪ್ರಮೋದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಮಧ್ಯಭಾರತ್ ವಿಶ್ವ ಹಿಂದೂ ಪರಿಷದ್ ಪ್ರಮುಖ್ ಮಹಾರಾಷ್ಟ್ರದ ಸಂದೀಪ್ ಮೆಹಂದ್ ಶಿವಾಜಿಯ ಬಸ್ರೂರು ಆಗಮನದ ವರದಿ ವಿವರಿಸಿದರು. ರಾಜೇಶ್ ಕಾವೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮೇಶ ಆಚಾರ್ಯ ವಂದಿಸಿದರು.
ಬಸ್ರೂರಿಗೂ ಶಿವಾಜಿಗೂ ನಂಟು!
ಬಸ್ರೂರು ಗ್ರಾಮ ಹದಿನಾರನೇ ಶತಮಾನದಲ್ಲಿ ಕರಾವಳಿ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಈ ಪಟ್ಟಣ ಯಾತ್ರಿಗಳಿಗೆ ತಂಗುದಾಣ, ವ್ಯಾಪಾರಿಗಳಿಗೆ, ಕರಕುಶಲ ಶಿಲ್ಪಿಗಳಿಗೆ, ಕಲಾವಿದರಿಗೆ, ನೇಕಾರರಿಗೆ ವ್ಯವಸ್ಥಿತವಾದ ರಸ್ತೆಗಳು ಮತ್ತು ಅಗ್ರಹಾರಗಳನ್ನು ಹೊಂದಿತ್ತು. ವಿಜಯನಗರ ಅರಸರ ಕಾಲದಲ್ಲಿ ವ್ಯಾಪಾರದ ಮುಖ್ಯ ಕೇಂದ್ರವಾಗಿತ್ತು. ಇಂತಹ ವ್ಯಾಪಾರ ಕೇಂದ್ರವನ್ನು ಪೋರ್ಚುಗೀಸರು ದಾಳಿ ಮಾಡಿ ವಶಪಡಿಸಿಕೊಂಡರು. ಇದರಿಂದ ಬೇಸರಗೊಂಡ ಕೆಳದಿಯ ಅರಸರು ಶಿವಾಜಿ ಮಹಾರಾಜರ ಮೊರೆಹೋದರು. 1665ರಲ್ಲಿ ಶಿವಾಜಿ ಮಹಾರಾಜರು ಮೊದಲ ನೌಕಾ ದಳದ ದಂಡಯಾತ್ರೆ ಕೈಗೊಂಡು ಸಿಂಧೂ ದುರ್ಗದಿಂದ ಹೊರಟು ಸಮುದ್ರ ಮಾರ್ಗವಾಗಿ ಬಸ್ರೂರಿಗೆ ಬಂದರು. ಐತಿಹಾಸಿಕ ವಿಜಯ ಸಾಧಿಸಿದ ಶಿವಾಜಿ ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಬಸ್ರೂರಿನಲ್ಲಿ 4 ವರ್ಷಗಳಿಂದ ವಿಜಯೋತ್ಸವ ಆಚರಿಸಲಾಗುತ್ತಿದೆ.