ವಿಜಯಪುರ: ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.
ನಗರದ ವಿವಿಧ ಅಭಿವೃದ್ಧಿ ವಿಷಯಗಳಾದ ಮಳೆ ನೀರು ಕೊಯ್ಲು, ಲೇಔಟ್ ನಿರ್ಮಾಣ, ಹೈಮಾಸ್ಕ್, ಅಂಗಡಿ ಹಂಚಿಕೆ, ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಕುರಿತು ಚರ್ಚಿಸಲಾಯಿತು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಾರ್ವಜನಿಕರು ಅಭಿವೃದ್ಧಿ ಯೋಜನೆ ಉದ್ಯಾನದಲ್ಲಿ ಕಟ್ಟಡವನ್ನು ಸಿದ್ಧಿ ಸಮಾಧಿ ಯೋಗ ಕೇಂದ್ರಕ್ಕೆ ಬಾಡಿಗೆಯಿಂದ ನೀಡಿದ್ದು, ಈಗಾಗಲೇ ಬಾಕಿ ಇರುವ ಬಾಡಿಗೆಯನ್ನು ಸಾರ್ವಜನಿಕರಿಂದ ಸಂಗ್ರಹಿಸಿ 75 ಸಾವಿರ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.
ಸಿದ್ಧಿ ಸಮಾಧಿ ಯೋಗ ಕೇಂದ್ರಕ್ಕೆ ಈಗಿರುವ ಬಾಡಿಗೆ ಹೊರೆಯಾಗುತ್ತಿದ್ದು, ಸಾರ್ವಜನಿಕರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಬಾಡಿಗೆ ಹೊರೆ ಕಡಿಮೆ ಮಾಡುವಂತೆ ಆಯುಕ್ತರಲ್ಲಿ ಅವರು ಕೋರಿದರು.
ನಾಗಠಾಣ ಶಾಸಕ ದೇವಾನಂದ ಚವಾಣ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಔದ್ರಾಮ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟಿಲ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.