ವಿಜಯಪುರ: ಕರೊನಾ ಉಲ್ಬಣಿಸುತ್ತಿರುವುದರಿಂದ ಸರ್ಕಾರದ ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ಸಂಸದ ರಮೇಶ ಜಿಗಜಿಣಗಿ ಜನರಲ್ಲಿ ಮನವಿ ಮಾಡಿದ್ದಾರೆ.
ಅನಿವಾರ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಹೊರಬರುವಾಗ ಮುಖಕ್ಕೆ ಮಾಸ್ಕ್ ಧರಿಸಿ, ಆಗಾಗ ಕೈತೊಳೆದುಕೊಳ್ಳಿ, ಪರಸ್ಪರ ಅಂತರ ಕಾಯ್ದುಕೊಳ್ಳಿ. ಇದರಿಂದ ಕರೊನಾ ನಿಯಂತ್ರಣ ಸಾಧ್ಯ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರುತ್ತಿರುವುದಕ್ಕೆ ಸರ್ಕಾರಿ ನಿಯಮ ಉಲ್ಲಂಘನೆಯೇ ಕಾರಣ. ಆಸ್ಪತ್ರೆಗಳಲ್ಲಿ ಕೊರತೆಗಳ ಆಗರವೇ ಇದೆ. ಇದಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಕಾರಣ. ಇದನ್ನು ಅರಿತಾದರೂ ಜನ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ತಪ್ಪದೆ ಪಾಲಿಸಲು ಅವರು ಮನವಿ ಮಾಡಿದ್ದಾರೆ.
ಜನ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಅದರ ಅಗತ್ಯತೆ ಇಲ್ಲ ಎಂದು ಅನಾಸಕ್ತಿ ತೋರಿಸುತ್ತಿರುವುದು ಸರಿ ಅಲ್ಲ. ಸರ್ಕಾರ ಬಡವರಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಿದೆ. ಇದರ ಲಾಭ ಪಡೆದು ಕರೊನಾದಿಂದ ಪಾರಾಗಬೇಕೆಂದು ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.