ವಿಜಯಪುರ: ಕ್ರೀಡಾಪಟುಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಉಚಿತವಾಗಿ ಪ್ರವೇಶ ಹಾಗೂ ತರಬೇತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕ್ರೀಡಾ ಸಂಸ್ಥೆಗಳ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಮಾತನಾಡಿ, ಕ್ರೀಡಾಂಗಣ ಪ್ರವೇಶಕ್ಕೆ ಯಾವ ಜಿಲ್ಲೆಯಲ್ಲಿಯೂ ಶುಲ್ಕ ಇರುವುದಿಲ್ಲ. ಪ್ರವೇಶ ಶುಲ್ಕ ತೆಗೆದುಕೊಳ್ಳುವುದರಿಂದ ಬಡ ಕ್ರೀಡಾಪಟುಗಳಿಗೆ ತೊಂದರೆ ಯುಂಟಾಗುತ್ತದೆ. ಬಡ ಕ್ರೀಡಾಪಟುಗಳ ಹಿತದೃಷ್ಟಿಯಿಂದ ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಿ.ಎಂ.ಕೋಕರೆ , ಆರ್. ಎಸ್. ಬಿದರಿ, ರಾಜು ಬಿರಾದಾರ, ಎಸ್.ಕೆ.ಇನಾಂದಾರ, ಬಸವರಾಜ ಗೊಳಸಂಗಿ, ಜಿಲ್ಲಾ ಅಥ್ಲೆಟಿಕ್ ಕ್ರೀಡಾ ಸಂಸ್ಥೆ, ವಾಲಿಬಾಲ್ ಸಂಸ್ಥೆ, ಬಾಸ್ಕೆಟ್ಬಾಲ್ ಸಂಸ್ಥೆ, ಸೈಕ್ಲಿಂಗ್ ಸಂಸ್ಥೆ, ಫುಟ್ಬಾಲ್ ಹಾಗೂ ಹಾಕಿ ಕ್ರೀಡಾ ಸಂಸ್ಥೆ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳು ಮತ್ತು ಜಿಲ್ಲಾ ಕ್ರೀಡಾಂಗಣದ ನಾಮ ನಿರ್ದೇಶಕ ಸದಸ್ಯರು ಭಾಗವಹಿಸಿದ್ದರು.