ನವದೆಹಲಿ: ಭಾರತದ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿ ಬ್ರಿಟನ್ನಲ್ಲಿ ಅಡಗಿಕೊಂಡಿದ್ದ ವಾಣಿಜ್ಯೋದ್ಯಮಿ ವಿಜಯ್ ಮಲ್ಯ ಇನ್ನು 28 ದಿನಗಳಲ್ಲಿ ಭಾರತದ ಜೈಲು ಸೇರುವುದು ಬಹುತೇಕ ಖಚಿತವಾಗಿದೆ.
ಬ್ರಿಟನ್ನ ಹೈಕೋರ್ಟ್ 2018ರಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಹೈಕೋರ್ಟ್ನ ಮತ್ತೊಂದು ಪೀಠಕ್ಕೆ ಅವರು ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಅಪ್ಪನ ಕಾರನ್ನು ಗಂಟೆಗೆ 308 ಕಿ.ಮೀ ವೇಗದಲ್ಲಿ ಚಲಾಯಿಸಿದ ಮಗನ ಸ್ಥಿತಿ ಹೇಳತೀರದು..!
ಆದರೆ ಆ ನ್ಯಾಯಪೀಠ ಕೂಡ ಇವರ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಬ್ರಿಟನ್ನ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಿದ್ದರು. ಈ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ವಿಜಯ್ ಮಲ್ಯ ಅವರ ಮೇಲ್ಮನವಿಯನ್ನು ಸ್ವೀಕರಿಸಲು ಗುರುವಾರ ನಿರಾಕರಿಸಿದ್ದು, ಅವರ ಈ ಪ್ರಯತ್ನವೂ ವಿಫಲವಾದಂತಾಗಿದೆ.
ಈ ಹಿನ್ನೆಲೆಯಲ್ಲಿ ಅಪರಾಧಿಗಳ ವಿನಿಮಯದ ಭಾರತದೊಂದಿಗೆ ಹೊಂದಿರುವ ಒಪ್ಪಂದದನ್ವಯ ಕಿಂಗ್ ಆಫ್ ಗುಡ್ ಟೈಮ್ಸ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶಕ್ಕೆ ಬ್ರಿಟನ್ನ ಗೃಹ ಸಚಿವಾಲಯದ ಅಧಿಕಾರಿ ಪ್ರೀತಿ ಪಟೇಲ್ ಶೀಘ್ರದಲ್ಲೇ ಸಹಿ ಹಾಕಲಿದ್ದಾರೆ. ಇದಾಗಿ 28 ದಿನಗಳ ಒಳಗಾಗಿ ವಿಜಯ್ ಮಲ್ಯ ಮುಂಬೈನ ಜೈಲು ಸೇರುವುದು ಖಚಿತವಾಗಿದೆ.
ಬ್ರಿಟನ್ ಹೈಕೋರ್ಟ್ನ ಆದೇಶದ ವಿರುದ್ಧ ಬ್ರಿಟನ್ನ ಸುಪ್ರೀಂಕೋರ್ಟ್ಗೆ ಯಾವುದೇ ಮೇಲ್ಮನವಿ ಸಲ್ಲಿಸಬೇಕೆಂದಾದರೆ ಏನಾದರೂ ಕಾನೂತ್ಮಕ ಅಂಶಗಳಿರಬೇಕು. ಹಾಗೂ ಹೈಕೋರ್ಟ್ನ ಆದೇಶ ಹೊರಬಿದ್ದ 14 ದಿನಗಳೊಳಗಾಗಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ವಿಜಯ್ ಮಲ್ಯ ಸಲ್ಲಿಸಿರುವ ಮೇಲ್ಮನವಿಯಲ್ಲಿ ಯಾವುದೇ ಕಾನೂನಾತ್ಮಕ ಅಂಶಗಳಿಲ್ಲ. ಅಲ್ಲದೆ, ಸಲ್ಲಿಸುವಲ್ಲಿ ತಡವಾಗಿದೆ. ಹಾಗಾಗಿ ಅವರು ಭಾರತಕ್ಕೆ ಹಸ್ತಾಂತರಗೊಳ್ಳುವುದು ನಿಶ್ಚಿವಾಗಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 4ಜಿ ಸ್ಮಾರ್ಟ್ಫೋನ್ ಬಳಕೆದಾರರೇ ಇನ್ನೆರಡು ವರ್ಷ ನಿಮಗಿಲ್ಲ ಚಿಂತೆ..!
ಪ್ರಧಾನಿ ಮೋದಿ ದಿಗ್ವಿಜಯ: ಹಲವು ಬ್ಯಾಂಕ್ಗಳಿಂದ ಸಾಲ ಪಡೆದು ಮರಳಿಸದೆ ವಂಚಿಸಿದ್ದ ಹಲವು ಉದ್ಯಮಿಗಳು ಭಾರತದಿಂದ ಪರಾರಿಯಾಗಿದ್ದರು. ಅವರಲ್ಲಿ ವಿಜಯ್ ಮಲ್ಯ ಮತ್ತು ವಜ್ರೋದ್ಯಮಿ ನೀರವ್ ಮೋದಿ ಪ್ರಮುಖರಾಗಿದ್ದರು. ಅನ್ಯರಾಷ್ಟ್ರಗಳಿಗೆ ಪರಾರಿಯಾಗಲು ಇವರೆಲ್ಲರಿಗೂ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯುತ್ತಿದ್ದವು.
ಇದೀಗ ವಂಚಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಮರಳಿ ಕರೆತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ಬಹುದೊಡ್ಡ ದಿಗ್ವಿಜಯ ಎಂದು ಬಣ್ಣಿಸಲಾಗುತ್ತಿದೆ.