ಐನಾಪುರ: ನೆರೆಯ ಕುಡಚಿ ಪಟ್ಟಣ ಹಾಗೂ ಪಕ್ಕದ ಮಹಾರಾಷ್ಟ್ರದ ಸಾಗ್ಲಿ ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡಿರುವುದರಿಂದ ಕಾಗವಾಡ ತಾಲೂಕಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಐನಾಪುರ- ಕುಡಚಿ ಮಾರ್ಗದ ಬಾರಿಗಡ್ಡೆ ರಸ್ತೆಯಲ್ಲಿ ಅಡ್ಡಲಾಗಿ ತಗ್ಗು ತೋಡಿ ವಾಹನ ಸಂಚಾರಕ್ಕೆ ದಿಗ್ಬಂಧನ ಹಾಕಲಾಗಿದೆ.
ಕುಡಚಿ ಪಟ್ಟಣದಲ್ಲಿ 13 ಜನ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧರ್ಮ ಸಭೆಯಲ್ಲಿ ಭಾಗವಹಿಸಿದ್ದು, ಅದರಲ್ಲಿ ನಾಲ್ವರಿಗೆ ಸೋಂಕು ತಗುಲಿದೆ. ಉಳಿದವರ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಅವರನ್ನು ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ನಿಗಾ ವ್ಯವಸ್ಥೆಯಲ್ಲಿ ಇಡಲಾಗಿದೆ. ಪಕ್ಕದ ಸಾಂಗ್ಲಿಯಲ್ಲಿ 12 ಜನರಿಗೆ ಸೋಕು ತಗುಲಿದೆ.
ಈ ಎರಡು ಪಟ್ಟಣಗಳ ಮಧ್ಯೆ ಇರುವ ಕಾಗವಾಡ ತಾಲೂಕಿನ ಉಗಾರ, ಶಿರಗುಪ್ಪಿ, ಮಂಗಸೂಳಿ, ಐನಾಪುರ, ಜುಗೂಳ, ಮೋಳೆ ಸೇರಿ ಹಲವು ಗ್ರಾಮಗಳ ಜನರಲ್ಲಿ ಕರೊನಾ ಭಯ ಹೆಚ್ಚಾಗುವಂತೆ ಮಾಡಿದೆ. ಕುಡಚಿ ಪಟ್ಟಣಕ್ಕೆ ಹೊಂದಿರುವ ಜಮಖಂಡಿ ರಸ್ತೆ, ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಉಗಾರ ಸೇತುವೆ, ಸಂಪೂರ್ಣವಾಗಿ ಬಂದ್ ಮಾಡಿ ದಿನದ 24 ಗಂಟೆ ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿದೆ. ಪಟ್ಟಣದಲ್ಲಿರುವ ಮಾಂಸದ ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6ರಿಂದ 8 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮುಖ್ಯ ಹಾಗೂ ಅಡ್ಡ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿಸಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೇಕಾಬಿಟ್ಟಿಯಾಗಿ ಅಲೆದಾಡುವವರ ಮೇಲೆ ಕ್ರಮ ಕೈಗೊಂಡು ವಾಹನ ಜಪ್ತಿ ಮಾಡಲಾಗುವುದು ಎಂದು ಪಿಎಎಸ್ಐ ಕಾಗವಾಡ ಹಣಮಂತ ಶಿರಹಟ್ಟಿ ತಿಳಿಸಿದ್ದಾರೆ.