ಶನಿವಾರಸಂತೆ: ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಭಾರತಿ ವಿದ್ಯಾಸಂಸ್ಥೆ ಸಹಭಾಗಿತ್ವದಲ್ಲಿ ಭಾರತಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಟೆನಿಕಾಯ್ಟ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ರಾಮನಗರ ಜಿಲ್ಲಾ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದವು.
ಶುಕ್ರವಾರ ಆರಂಭವಾದ ಪಂದ್ಯಾವಳಿಯಲ್ಲಿ ರಾಜ್ಯದ 31 ಜಿಲ್ಲೆಗಳಿಂದ ಬಾಲಕ ಮತ್ತು ಬಾಲಕಿಯರು ಸೇರಿದಂತೆ 60 ತಂಡಗಳು ಭಾಗವಹಿಸಿದ್ದವು. ಶನಿವಾರ ನಡೆದ ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಹಾಸನ ಮತ್ತು ಉತ್ತರ ಕನ್ನಡ ಜಿಲ್ಲಾ ತಂಡಗಳ ಮಧ್ಯೆ ಸೆಣಸಾಟ ನಡೆಯಿತು. ಉತ್ತರ ಕನ್ನಡ ಜಿಲ್ಲಾ ತಂಡ 21 ಅಂಕಗಳನ್ನು ಪಡೆದು ಗೆಲುವು ಸಾಧಿಸಿದರೆ, ಹಾಸನ ತಂಡ 17 ಅಂಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನ ಪಡೆಯಿತು.
ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ರಾಮನಗರ ಜಿಲ್ಲಾ ತಂಡ 21 ಅಂಕ ಪಡೆದುಕೊಂಡು ಗೆಲುವು ಸಾಧಿಸಿದರೆ, ಹಾಸನ ಜಿಲ್ಲಾ ತಂಡ 16 ಅಂಕ ಪಡೆದುಕೊಂಡು ದ್ವಿತೀಯ ಸ್ಥಾನ ಗಳಿಸಿತು.
ಸಮಾರೋಪ ಸಮಾರಂಭದಲ್ಲಿ ರಾಜ್ಯ ಒಕ್ಕಲಿಗರ ಸಂಘಧ ಕಾರ್ಯಾಧ್ಯಕ್ಷ ಮತ್ತು ಸಮಾಜ ಸೇವಕ ಹರಪಳ್ಳಿ ರವೀಂದ್ರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಗುರಿಯ ಮನೋಭಾವನೆ ಇದ್ದಲ್ಲಿ ಸಾಧನೆ ಮಾಡಬಹುದು. ಹೆಚ್ಚಿನ ಜನರಿಗೆ ಪರಿಚಯ ಇಲ್ಲದ ಗ್ರಾಮೀಣ ಕ್ರೀಡೆಯಾದ ಟೆನಿಕಾಯ್ಟ ಪಂದ್ಯಾವಳಿಯನ್ನು ರಾಜ್ಯ ಮಟ್ಟದಲ್ಲಿ ಹಮ್ಮಿಕೊಂಡಿರುವ ಪ.ಪೂ.ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಭಾರತಿ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ರಾಜ್ಯ ಪದವಿ ಪೂರ್ವ ದೈಹಿಕ ಶಿಕ್ಷಣ ಇಲಾಖೆಯ ಕ್ರೀಡಾ ವೀಕ್ಷಕ ಆನಂದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಪುಟ್ಟರಾಜು, ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಎನ್.ಕೆ.ಅಪ್ಪಸ್ವಾಮಿ ಮಾತನಾಡಿದರು.
ವಿದ್ಯಾಸಂಸ್ಥೆ ಮಾಜಿ ಅಧ್ಯಕ್ಷ ಎನ್.ಬಿ.ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಜೇತ ತಂಡಗಳಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು. ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್ಪಾಲ್, ರಾಜ್ಯ ಪದವಿ ಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಮಹಂತೇಶ್ ಮರಗೋಡು, ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಷ, ನಿರ್ದೇಶಕರಾದ ಮಹಮ್ಮದ್ ಗೌಸ್, ಬಿ.ಟಿ.ರಂಗಸ್ವಾಮಿ, ಪುಷ್ಪಾ, ಕೆ.ಸಿ.ಉತ್ತಪ್ಪ, ಭಾರತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಜೆ.ಅಶೋಕ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಇ.ಎಂ.ದಯಾನಂದ್, ಹಿರಿಯ ಶಿಕ್ಷಕ ನರಸಿಂಹಮೂರ್ತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಿ.ಎಲ್.ಸುಬ್ಬಯ್ಯ, ದಾನಿ ಮಂಜೂರು ತಮ್ಮಣ್ಣಿ ಇತರರು ಇದ್ದರು.