ಲಿಂಗಸುಗೂರು: ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಅಭಾವ ಮತ್ತು ತಾರತಮ್ಯ ಧೋರಣೆ ಕುರಿತು ರೈತರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಅಂಥ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳವುದು ಬಿಟ್ಟು ನೀವೇನು ಮಾಡುತ್ತೀದ್ದಿರಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಡಿ.ಎಸ್.ಹೂಲಗೇರಿ ಮತ್ತು ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ್ ತರಾಟೆಗೆ ತೆಗೆದುಕೊಂಡರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಗರಂ ಆದ ಶಾಸಕರು, ಯೂರಿಯಾ ಗೊಬ್ಬರ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ನೀಡುತ್ತ ಸಾಮಾನ್ಯ ರೈತರ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ದೂರುಗಳಿವೆ. ಅಗತ್ಯವಿದ್ದಾಗ ಗೊಬ್ಬರ ದೊರೆತರೆ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಗೊಬ್ಬರ ಅಂಗಡಿಗಳು, ಗೋಧಾಮುಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಶೋಕತ್ ಅಲಿಗೆ ತಾಕೀತು ಮಾಡಿದರು.
ತಾಲೂಕಿನಲ್ಲಿ ಕೋವಿಡ್-19 ಸೋಂಕಿತರಿಗೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಬದಲು ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತಿದ್ದು, ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ಬರುತ್ತಿದೆ ಎಂಬ ದೂರುಗಳು ಬಂದಿವೆ. ಸ್ಥಳೀಯವಾಗಿ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆಗೆ ಮುಂದಾಗುವಂತೆ ಟಿಎಚ್ಒ ಡಾ.ರುದ್ರಗೌಡ ಪಾಟೀಲಗೆ ಶಾಸಕ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಬರಗಾಲ ಸಮಯದಲ್ಲಿ ಕೈಗೊಂಡ ಕೆಲಸಕ್ಕೆ ಕೂಲಿಕಾರರಿಗೆ ಸರಿಯಾಗಿ ಕೂಲಿಹಣ ನೀಡುತ್ತಿಲ್ಲ. ಶಿಥಿಲಾವಸ್ಥೆಗೆ ಬಂದಿರುವ ಅಂಗನವಾಡಿ, ಬಿಸಿಯೂಟ ಕೊಠಡಿಗಳ ತೆರವು ಕಾರ್ಯ ಕೈಗೊಂಡು ಹೊಸದಾಗಿ ಕಟ್ಟಡ ನಿರ್ಮಿಸಲು ಮುಂದಾಗಬೇಕೆಂದು ಎಂದು ಪಿಎಂಜಿಎಸ್ಐ ಅಧಿಕಾರಿಗಳಿಗೆ ತಾಪಂ ಇಒ ಪಂಪಾಪತಿ ಹಿರೇಮಠ ಸೂಚಿಸಿದರು. ಜಿಪಂ ಸದಸ್ಯರಾದ ಸಂಗಣ್ಣ ದೇಸಾಯಿ, ಬಸನಗೌಡ ಕಂಬಳಿ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಇದ್ದರು.