ಮಂಡ್ಯ: ಮನುಷ್ಯನಿಗೆ ಮೊದಲು ನಡೆ ನುಡಿಯಲ್ಲಿ ಎಚ್ಚರವಿರಬೇಕು ಎಂದು ವೈದ್ಯನಾಥಪುರ ಗ್ರಾಮದ ಕದಂಬ ಜಂಗಮ ಮಠದ ಶ್ರೀ ರೇಣುಕಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದ 129ನೇ ಆಧ್ಯಾತ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಬಗ್ಗೆ ಅರಿವಿರಬೇಕು. ಗುರುವಿನಿಂದ ಇಷ್ಟಲಿಂಗ ಬರುತ್ತದೆ. ಆದ್ದರಿಂದ ಗುರುವಿನ ಮೇಲೆ, ವಿಶ್ವಾಸ, ನಂಬಿಕೆ, ಪ್ರೀತಿ ಇರಬೇಕು ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಾತನಾಡಿ, ಶರಣರು ಎಂದಿಗೂ ತಮ್ಮನ್ನು ತಾವೂ ಪರಿಪೂರ್ಣರೆಂದು ಕರೆದುಕೊಂಡಿಲ್ಲ. ಅವರು ಯಾವಾಗಲೂ ಪರಿಪೂರ್ಣವಾದ ಶೂನ್ಯ ಚಿಂತನೆಯೆಡೆಗೆ ಸಾಗುವ ಮನಸ್ಥಿತಿಯನ್ನು ಇಟ್ಟುಕೊಂಡವರು ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು, ಉಪಾಧ್ಯಕ್ಷ ದ್ಯಾವಣ್ಣ, ಪುರ ಗ್ರಾಮದ ಮಾಜಿ ಉಪಾಧ್ಯಕ್ಷ ದೇವರಾಜಪ್ಪ, ಸಂಘದ ನಿರ್ದೇಶಕರಾದ ಶಿವಕುಮಾರ್, ಉಮೇಶ್, ಪುಟಬುದ್ದಿ, ಹೇಮಾವತಿ ಇತರರಿದ್ದರು.