ಉತ್ತರಪ್ರದೇಶ: ಹಲಾಲ್ ಪ್ರಮಾಣಪತ್ರ ನೀಡುವ ವಿಷಯದಲ್ಲಿ ಹಲಾಲ್ ಕೌನ್ಸಿಲ್ (ಮುಂಬೈ)ನ ನಾಲ್ವರನ್ನ ಯುಪಿ ಎಸ್ಟಿಎಫ್ ಬಂಧಿಸಿದೆ. ಹಲಾಲ್ ಪ್ರಮಾಣೀಕರಣದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಮುಂಬೈನ ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಬಂಧಿಸಿದೆ. ಬಂಧಿತ ನಾಲ್ವರನ್ನು ಮೌಲಾನಾ ಮುದಾಸಿರ್, ಹಬೀಬ್ ಯೂಸುಫ್ ಪಟೇಲ್, ಅನ್ವರ್ ಖಾನ್ ಮತ್ತು ಮೊಹಮ್ಮದ್ ತಾಹಿರ್ ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ನಿಷೇಧಿಸಿರುವುದು ಗಮನಾರ್ಹವಾಗಿದೆ. ಹಲಾಲ್ ಪ್ರಮಾಣೀಕರಣದ ಹೆಸರಿನಲ್ಲಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕೆಲವು ಸಂಸ್ಥೆಗಳು, ಉತ್ಪಾದನಾ ಕಂಪನಿಗಳು ಹಾಗೂ ಅವುಗಳ ಮಾಲೀಕರು ಮತ್ತು ಇತರ ಅಪರಿಚಿತರ ವಿರುದ್ಧ ಲಕ್ನೋದಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದರ ಮೇಲೆ ಈಗ ಕ್ರಮ ಕೈಗೊಳ್ಳಲಾಗಿದೆ.
ಸೋಮವಾರ, ಯುಪಿ ಎಸ್ಟಿಎಫ್ ಮುಂಬೈನ ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಬಂಧಿಸಿದೆ. ನವೆಂಬರ್ 23 ರಂದು ಲಕ್ನೋದ ಹಜರತ್ಗಂಜ್ ಕೋಟ್ವಾಲಿಯಲ್ಲಿ ಹಲಾಲ್ ಪ್ರಮಾಣಪತ್ರ ನೀಡಿ ವಂಚನೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಎಸ್ಟಿಎಫ್ಗೆ ನೀಡಲಾಗಿದೆ.
ಬಂಧಿತ ನಾಲ್ವರೂ ಆರೋಪಿಗಳು ಮುಂಬೈನ ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಪರವಾಗಿ ಹಲಾಲ್ ಪ್ರಮಾಣ ಪತ್ರ ನೀಡಲು ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದರು. ಪ್ರಮಾಣಪತ್ರ ನೀಡಲು ಪ್ರತಿ ಉತ್ಪನ್ನಕ್ಕೆ 1,000 ರಿಂದ 10,000 ರೂ. ವಿಧಿಸುತ್ತಿದ್ದರು.
ಹಲಾಲ್ ಕೌನ್ಸಿಲ್ ಆಫ್ ಇಂಡಿಯಾವು NABCB (ಪ್ರಮಾಣೀಕರಣ ಸಂಸ್ಥೆಗಳಿಗೆ ರಾಷ್ಟ್ರೀಯ ಮಾನ್ಯತೆ ಮಂಡಳಿ) ಅಥವಾ ಯಾವುದೇ ಇತರ ಸರ್ಕಾರಿ ಸಂಸ್ಥೆಯಿಂದ ಅಧಿಕೃತಗೊಂಡಿಲ್ಲ. ಪ್ರಮಾಣಪತ್ರವನ್ನು ನೀಡುವ ಮೊದಲು ಅವರು ಯಾವುದೇ ಉತ್ಪನ್ನದ ಯಾವುದೇ ಲ್ಯಾಬ್ ಪರೀಕ್ಷೆಯನ್ನು ನಡೆಸುತ್ತಿರಲಿಲ್ಲ.
ಯಾವುದೇ ತನಿಖೆ ನಡೆಸದೆ, ಲ್ಯಾಬ್ ಪರೀಕ್ಷೆ ಮಾಡದೆ ಕೇವಲ ಹಲಾಲ್ ಪ್ರಮಾಣೀಕೃತ ಲೋಗೋ ನೀಡಿ ಸಂಸ್ಥೆಯಿಂದ ವಸೂಲಾತಿ ಮಾಡಲಾಗುತ್ತಿತ್ತು. ರಫ್ತಾಗುತ್ತಿರುವ ಮಾಂಸಾಹಾರಿ ಉತ್ಪನ್ನಗಳ ಜೊತೆಗೆ ರೆಸ್ಟೋರೆಂಟ್ಗಳಲ್ಲಿ ನೀಡಲಾಗುವ ತಿನಿಸುಗಳಿಗೂ ಹಲಾಲ್ ಪ್ರಮಾಣಪತ್ರವನ್ನು ನೀಡಲಾಗುತ್ತಿತ್ತು. ಆದರೆ, ಖಾದ್ಯ ತಯಾರಿಕೆಯಲ್ಲಿ ಸಂಸ್ಥೆಗೆ ಯಾವುದೇ ನಿಯಂತ್ರಣವಿರಲಿಲ್ಲ. ಮನಸೋಇಚ್ಛೆ ಹಣ ತೆಗೆದುಕೊಳ್ಳುವ ಉದ್ದೇಶದಿಂದ ಮಾತ್ರ ಹಲಾಲ್ ಪ್ರಮಾಣ ಪತ್ರ ನೀಡಲಾಗುತ್ತಿತ್ತು.
ಹಲಾಲ್ ಪ್ರಮಾಣಪತ್ರ ನೀಡುವ ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ಕಚೇರಿಗಳು ಮತ್ತು ಪ್ರಮಾಣಪತ್ರವನ್ನು ತೆಗೆದುಕೊಳ್ಳುವ ಕಂಪನಿಗಳನ್ನು ವಿಚಾರಣೆ ನಡೆಸಿದ ನಂತರ ಯುಪಿ ಎಸ್ಟಿಎಫ್ ಕ್ರಮ ಕೈಗೊಂಡಿದ್ದು, ಸದ್ಯ ಆರೋಪಿಗಳನ್ನು ಜೈಲಿಗೆ ಕಳುಹಿಸಲು ಸಿದ್ಧತೆ ನಡೆದಿದೆ.
CBSE ಪರೀಕ್ಷೆಗೆ ಮುನ್ನ ಸೂಚನೆ: 30 ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಪಟ್ಟಿ ಬಿಡುಗಡೆ ಮಾಡಿದ ಮಂಡಳಿ, ಕ್ರಮಕ್ಕೆ ಆದೇಶ