ಬೆಂಗಳೂರು: ಪ್ರಧಾನಿ ಮೋದಿ ಅವರಿಗೆ ಫೈಟರ್ ರವಿ ಯಾರೆಂಬುದೇ ಗೊತ್ತಿಲ್ಲ. ಸ್ಥಳೀಯರ ಕಣ್ತಪ್ಪಿನಿಂದ ಈ ಅಚಾತುರ್ಯ ಸಂಭವಿಸಿದೆ. ನಮ್ಮಿಂದ ತಪ್ಪಾಗಿದೆ. ಎಸ್ಪಿ ಅವರು ಅಲ್ಲಿ ಯಾರ್ಯಾರು ಇರಬೇಕು ಎನ್ನುವುದನ್ನು ಗಮನಿಸಬೇಕಿತ್ತು. ಎಲ್ಲೋ ಒಂದು ಕೊರತೆ ಆಗಿದೆ ಎಂದು ಹೇಳುವ ಮೂಲಕ ಪ್ರಧಾನಿ ಆಗಮನದ ವೇಳೆ ಫೈಟರ್ ರವಿ ಸ್ವಾಗತ ಕೋರಿದ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿತ್ತು. ಈ ಕುರಿತ ಫೋಟೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿ, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಕಿಡಿಕಾರಿತ್ತು.
ಇದನ್ನೂ ಓದಿ: ದಶಪಥ ಹೆದ್ದಾರಿ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಬೇಕೆಂಬ ಕನಿಷ್ಟ ಸೌಜನ್ಯವೂ ಇಲ್ಲ; ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ.ಸುರೇಶ್
ಇದೀಗ ಕಾಂಗ್ರೆಸ್ ಮಾಡಿದ ಟೀಕೆಗೆ ಪ್ರತಿಕ್ರಿಯಿಸುತ್ತಾ, ಈ ಅಚಾತುರ್ಯಕ್ಕೆ ಪ್ರಧಾನಿ ಮೋದಿ ಜವಾಬ್ದಾರರಲ್ಲ. ಪ್ರಧಾನಿ ಅವರ ಲೈನ್ ಅಪ್ನಲ್ಲಿ ಹೇಗೆ ಬಂದ್ರು? ಯಾಕಾಗಿ ಬಂದ್ರು? ಯಾವ ಉದ್ದೇಶದಿಂದ ಬಂದ್ರು ಎನ್ನುವುದನ್ನು ಗಮನಿಸುತ್ತೇವೆ. ಈ ಬಗ್ಗೆ ಕಾಂಗ್ರೆಸ್ನವರು ಟ್ರೋಲ್ ಮಾಡುವ ಅಗತ್ಯವಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ರೌಡಿ ಶೀಟರ್ ಆಗಿರುವ ಮುಖಂಡರು ಇದ್ದಾರೆ. ಇವತ್ತು ಕಾಂಗ್ರೆಸ್ ನೇತೃತ್ವ ವಹಿಸಿರುವವರೇ ರೌಡಿ ಶೀಟರ್. ಈ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಒಂದು ಬೆರಳು ತೋರಿಸಿದರೆ, ನಾಲ್ಕು ಬೆರಳು ಅವರನ್ನು ತೋರಿಸುತ್ತದೆ ಎನ್ನುವುದನ್ನ ನೆನಪಿಟ್ಟುಕೊಳ್ಳಬೇಕು. ಕೇವಲ ಚುನಾವಣಾ ಗಿಮಿಕ್ಗಾಗಿ ಮಾತಾಡಿದ್ರೆ ಜನರು ಉತ್ತರ ಕೊಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.