ಮೂಡಿಗೆರೆ: ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದ್ದ ಎಂ.ಪಿ.ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಹೊರ ಹಾಕಲಾಯಿತು. ಬೆಳೆಸಿದ ಪಕ್ಷದ ವಿರುದ್ಧ ಈಗ ಮಾತನಾಡುತ್ತಿರುವ ಅವರಿಗೆ ಬದ್ಧತೆ ಇಲ್ಲ ಎಂದು ತಾಲೂಕು ಬಿಜೆಪಿ ವಕ್ತಾರ ವಿನಯ್ ಹಳೇಕೋಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಇತ್ತೀಚೆಗೆ ಕಳಸದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ದಲಿತರು ಬಿಜೆಪಿಯನ್ನು ತುಳಿಯುವಂತೆ ಮಾಡಿದ್ದೇನೆ. ಬಿಜೆಪಿಯಲ್ಲಿದ್ದ ದಲಿತರು ಸಾಮೂಹಿಕವಾಗಿ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂ.ಪಿ.ಕುಮಾರಸ್ವಾಮಿ ಬಿಜೆಪಿಗೆ ಬರುವ ಮುಂಚೆ ಸಾವಿರಾರು ದಲಿತ ನಾಯಕರು ಮತ್ತು ಕಾರ್ಯಕರ್ತರು ಪಕ್ಷದಲ್ಲಿದ್ದು ಸಂಘಟಿಸಿದ್ದಾರೆ. ಗೆದ್ದಲಿನಂತೆ ಎಂ.ಪಿ.ಕುಮಾರಸ್ವಾಮಿ ಬಿಜೆಪಿಗೆ ಬಂದಿದ್ದರು. ಪಕ್ಷ ಅವರನ್ನು ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಮಾಡಿತು. ನಂತರ 5 ಬಾರಿ ಟಿಕೆಟ್ ನೀಡಿದ್ದು, 3 ಬಾರಿ ಶಾಸಕರಾಗಿ ಆಯ್ಕೆಯಾದರು. ಶಾಸಕರಾದ ನಂತರ ಭ್ರಷ್ಟಾಚಾರ ಎಸಗಿದ್ದರಿಂದ ಕಳೆದ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಇತ್ತೀಚೆಗೆ ಕಾಂಗ್ರೆಸ್ಗೆ ಸೇರುವಾಗ ಕಾಂಗ್ರೆಸ್ ನನ್ನ ಮೂಲ ಮನೆ ಎಂದಿದ್ದರು. ಹಾಗಾದರೆ ಕಾಂಗ್ರೆಸ್ನಲ್ಲೇ ಇದ್ದು ಶಾಸಕರಾಗಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ಎಸಗಿರುವ ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ನಲ್ಲಿರುವುದು ಸೂಕ್ತ. ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷಗಳಲ್ಲಿ ಶಾಸಕನಾಗುವ ಶಕ್ತಿ ಅವರಲ್ಲಿಲ್ಲ. ಅವರ ಸುಳ್ಳಿನ ಹೇಳಿಕೆಗಳನ್ನು ದಲಿತ ಸಮುದಾಯದವರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.