ಕೊಟ್ಟೂರು: ಕರೊನಾ ಸೋಂಕಿತರಿಗಾಗಿ ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೃಹತ್ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಲಾಗಿದೆ. ಆದರೆ, ಜೋಡಣೆ ಮಾಡದ ಕಾರಣ ಬಳಕೆಯಾಗುತ್ತಿಲ್ಲ.
ಸೋಂಕು ತಗುಲಿದ ವ್ಯಕ್ತಿಗೆ ಮೊದಲು ಬೇಕಾಗಿರುವುದು ಆಕ್ಸಿಜನ್. ಸಕಾಲಕ್ಕೆ ಆಕ್ಸಿಜನ್ ಸಿಕ್ಕರೆ ಜೀವ ಉಳಿದಂತೆಯೇ ಎಂಬುದು ವೈದ್ಯರ ಅನಿಸಿಕೆ. ಆದ್ದರಿಂದ ಸರ್ಕಾರ ಎಲ್ಲ ಸರ್ಕಾರಿ ಆಸ್ಪತ್ರೆಗೆ ಬೃಹತ್ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಿದೆ. ಈಗಾಗಲೇ ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ಗಳು ಬಳಕೆಯಾಗುತ್ತಿವೆ. ಆದರೆ, ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಇನ್ನೂ ಬಳಕೆಯಾಗುತ್ತಿಲ್ಲ. ಉಜ್ಜಿನಿಯಲ್ಲಿ ಆಕ್ಸಿಜನ್ ಸಿಲಿಂಡರ್ ಸುರಕ್ಷಿತವಾಗಿ ಇಡಲು ಆಸ್ಪತ್ರೆ ಹೊರಭಾಗದಲ್ಲಿ ಕೋಣೆ ನಿರ್ಮಿಸಲಾಗಿದೆ. ವಾರ್ಡ್ಗಳಿಗೆ ಆಕ್ಸಿಜನ್ ಸರಬರಾಜು ಮಾಡಲು ಪೈಪ್ಗಳನ್ನು ಗೋಡೆಗೆ ಫಿಕ್ಸ್ ಮಾಡಲಾಗಿದೆ. ಆದರೆ, ಸಿಲಿಂಡರ್ ಜೋಡಿಸಿಲ್ಲ. ಯಂತ್ರಗಳ ನೆಪದಲ್ಲಿ ತಂದಿಟ್ಟ ಜಾಗದಲ್ಲೇ ಬಿಡಲಾಗಿದ್ದು, ರೋಗಿಗಳ ಸಂಬಂಧಿಕರು ಬಟ್ಟೆ ಒಣಗಳು ಬಳಕೆ ಮಾಡುತ್ತಿದ್ದಾರೆ. ದೀಘಾವಧಿ ರೋಗದಿಂದ ಬಳಲುವವರು ಬಂದರೆ ಪರಿಸ್ಥಿತಿ ಏನು ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಕೊಟ್ಟೂರು, ಚಿಕ್ಕಜೋಗಿಹಳ್ಳಿ, ಕಾನಹೊಸಹಳ್ಳಿ, ಉಜ್ಜಿನಿ ಸರ್ಕಾರಿ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಬಂದಿವೆ. ಕೆಲ ಆಸ್ಪತ್ರೆಯಲ್ಲಿ ಪೈಪ್ ಜೋಡಿಸುವ ಕಾರ್ಯ ಆಗಿಲ್ಲ. ಉಜ್ಜಿನಿಯಲ್ಲಿ ಸಿಲಿಂಡರ್ ಕೋಣೆ, ಪೈಪ್ಲೈನ್ ಆಗಿವೆ. ಆದರೆ, ಇನ್ನೂ ಯಂತ್ರಗಳು ಬಂದಿಲ್ಲ. ಬಂದ ತಕ್ಷಣ ಸಿಲಿಂಡರ್ ಬಳಕೆಯಾಗಲಿವೆ.
| ಡಾ.ಷಣ್ಮುಖ ನಾಯ್ಕ ಟಿಎಚ್ಒ, ಕೂಡ್ಲಿಗಿ