More

    ಮಂಗಳೂರಲ್ಲಿ ಬೆಳಗ್ಗೆ ಹಣ ಕದ್ದು, ಮಧ್ಯಾಹ್ನ ಉಡುಪಿಯಲ್ಲಿ ಸಿಕ್ಕಿಬಿದ್ದ!

    ಉಡುಪಿ: ಮಂಗಳೂರಲ್ಲಿ ಕಾರಿನಿಂದ ಬೆಳಗ್ಗೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ ಮಧ್ಯಾಹ್ನ ಉಡುಪಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಮೂಡುಬಿದಿರೆ ಕಾಪಿಕಾಡು ತೋಡಾರ್ ಗ್ರಾಮದ ನಿವಾಸಿ ಗುರುಪ್ರಸಾದ್(32) ಆರೋಪಿ.

    ಮಂಗಳೂರು ಕ್ಲಾಕ್ ಟವರ್ ಬಳಿ ನಿಲ್ಲಿಸಿದ್ದ ಕ್ರೆಟಾ ಕಾರಿನಿಂದ ಆರೋಪಿ 2.03 ಲಕ್ಷ ರೂ. ನಗದನ್ನು ಬುಧವಾರ ಬೆಳಗ್ಗೆ ಕಳ್ಳತನ ಮಾಡಿ ಉಡುಪಿ ಕಡೆಗೆ ಪರಾರಿಯಾಗಿದ್ದ. ಕಳವು ಮಾಡಿದ್ದ ಹಣದಲ್ಲಿ ಆರೋಪಿ 8 ಸಾವಿರ ರೂ. ಬೆಲೆಬಾಳುವ ಮೊಬೈಲ್ ಉಡುಪಿಯಲ್ಲಿ ಖರೀದಿಸಿದ್ದ. ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಿದ್ದು, ಅಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ.

    ಇದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ನಗದು ಮತ್ತು ಮೊಬೈಲ್ ವಶಪಡಿಸಿಕೊಂಡು ಆರೋಪಿಯನ್ನು ಉಡುಪಿ ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಈ ಆರೋಪಿ 2015ರಲ್ಲಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀಗ ಹಾಕಿದ್ದ ಮನೆಯ ಹೆಂಚು ತೆಗೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದು, ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

    ಡಿಸಿಐಬಿ ಇನ್‌ಸ್ಪೆಕ್ಟರ್ ಮಂಜಪ್ಪ ಡಿಆರ್, ಎಎಸ್‌ಐ ರವಿಚಂದ್ರ, ಸಿಬ್ಬಂದಿ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ರಾಜ್‌ಕುಮಾರ್, ದಯಾನಂದ ಪ್ರಭು, ಶಿವಾನಂದ, ರಾಘವೇಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts