ತರೀಕೆರೆ: ಹುಣಸಘಟ್ಟ ಗ್ರಾಮದ ಶ್ರೀ ಹಾಲುಸ್ವಾಮಿ ಮಠದಲ್ಲಿ ಶರನ್ನವರಾತ್ರಿ ಆಚರಣೆಯ ಎರಡನೇ ದಿನವಾದ ಸೋಮವಾರ ಶ್ರೀ ಕ್ಷೇತ್ರದ ಉದ್ಭವ ಶ್ರೀ ಚೌಡೇಶ್ವರಿ ದೇವಿ ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದಳು.
ಪ್ರಾತಃ ಕಾಲ ಶ್ರೀ ಗುರುಮೂರ್ತಿ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಉದ್ಭವ ಶ್ರೀ ಚೌಡೇಶ್ವರಿ ದೇವಿ ಹಾಗೂ ಕೇತ್ರನಾಥ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಶ್ರೀ ಸೂಕ್ತ, ಪುರುಷ ಸೂಕ್ತ ಹಾಗೂ ದುರ್ಗಾ ಸೂಕ್ತದೊಂದಿಗೆ ಅಭಿಷೇಕ ಮಾಡಿ ಸಹಸ್ರ ನಾಮಾವಳಿ, ಲಲಿತಾ ಸಹಸ್ರ ನಾಮಾವಳಿ, ರುದ್ರಾಭಿಷೇಕ ನೆರವೇರಿಸಲಾಯಿತು.
ಸಂಜೆ ದುರ್ಗಾಸಪ್ತಶತಿ, ಪಾರಾಯಣ ನೆರವೇರಿಸಿ ಲೋಕ ಕಲ್ಯಾಣಾರ್ಥವಾಗಿ ಕನ್ನಿಕಾ ಪೂಜೆ ನಡೆಸಲಾಯಿತು. ಉದ್ಭವ ಶ್ರೀಚೌಡೇಶ್ವರಿ ದೇವಿ ಜತೆ ಕ್ಷೇತ್ರನಾಥ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿ ದೇವರ ದರ್ಶನ ಪಡೆದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.