ಬೆಳಗಾವಿ: ವಿಭಜನಾ (ವಾಟ್ನಿ) ಪತ್ರ ನೋಂದಣಿ ಮಾಡಿಕೊಡಲು ಲಂಚ ಕೇಳಿದ ಸವದತ್ತಿ ತಾಲೂಕಿನ ಮುರಗೋಡ ಸಬ್ ರಿಜಿಸ್ಟ್ರಾರ್ ಮತ್ತು ಬಾಂಡ್ ರೈಟರ್ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಸಬ್ ರಿಜಿಸ್ಟ್ರಾರ್ ಸಂತೋಷ ಕಪಲಿ, ಬಾಂಡ್ ರೈಟರ್ ಶಿವಯೋಗಿ ಶಂಕರಯ್ಯ ಮಲ್ಲಯ್ಯನವರ ಎಸಿಬಿ ಬಲೆಗೆ ಬಿದ್ದ ಆರೋಪಿಗಳು.
ವಾಟ್ನಿ ಪತ್ರ ನೋಂದಣಿ ಮಾಡಿಕೊಡಲು ಸಬ್ ರಿಜಿಸ್ಟ್ರಾರ್ ಸಂತೋಷ ಕಪಲಿ ಅವರು ಬಾಂಡ್ ರೈಟರ್ ಶಿವಯೋಗಿ ಶಂಕರಯ್ಯ ಮಲ್ಲಯ್ಯನವರ ಮೂಲಕ ನೋಂದಣಿ ಶುಲ್ಕ, ಇತರೆ ವೆಚ್ಚ ಎಂದು ಹೇಳಿ 10 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ಮುಂಗಡವಾಗಿ 6 ಸಾವಿರ ರೂ. ಫೋನ್ ಪೇ ಮೂಲಕ ಪಾವತಿಸಿದ್ದರು. ಅದರಲ್ಲಿ 2870 ರೂ. ರಶೀದಿ ಮಾತ್ರ ನೀಡಿದ್ದರು. ಬಳಿಕ ವಾಟ್ನಿ ಪತ್ರ ಕೇಳಿದಾಗ ಬಾಕಿ ಉಳಿದಿರುವ 4 ಸಾವಿರ ರೂ. ನೀಡಿ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಅಲ್ಲದೆ, ವಾಟ್ನಿ ಪತ್ರ ಕೊಡಲು ನಿತ್ಯ ಅಲೆದಾಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಶಿವಪ್ಪ ವರಗಣ್ಣವರ ಎಂಬುವರು ಎಸಿಬಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಇನ್ನೊಬ್ಬ ಅಧಿಕಾರಿಯ ಲಂಚದ ಹಣ ಮನೇಲಿಟ್ಟುಕೊಂಡು ಸಿಕ್ಕಿಬಿದ್ದ ಅಧಿಕಾರಿ!
ದೂರಿನ ಆಧಾರದ ಮೇಲೆ ಬುಧವಾರ ದಾಳಿ ನಡಿಸಿದ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವಾಗಿ ರೆಡ್ ಹ್ಯಾಂಡ್ ಆಗಿ ಆರೋಪಿತರನ್ನು ಹಿಡಿದು ಬಂಧಿಸಿದ್ದಾರೆ. ಡಿವೈಎಸ್ಪಿ ಜಿ.ಎಂ. ಕರುಣಾಕರಶೆಟ್ಟಿ, ಪೊಲೀಸ್ ನಿರೀಕ್ಷಕ ಎ.ಎಸ್. ಗುದಿಗೊಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ಎಸಿಬಿ ಎಸ್ಪಿ ಬಿ.ಎಸ್.ನೇಮಕಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.