ಪಟನಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕರೊನಾ ನಿರ್ವಹಣೆಯಲ್ಲಿ ತುಂಬಾ ವಿಫಲವಾದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಕರೊನಾ ಮಹಾಮಾರಿಯಿಂದ ಭಾರತವನ್ನು ರಕ್ಷಣೆ ಮಾಡಿದರು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಹೊಗಳಿದರು.
ನವೆಂಬರ್ 7ರಂದು ಬಿಹಾರದಲ್ಲಿ ನಡೆಯಲಿರುವ ಅಂತಿಮ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದ ದರ್ಭಾಂಗ್ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಜೆ.ಪಿ. ನಡ್ಡಾ ಮಾತನಾಡಿದರು.
ಅಮೆರಿಕ ಚುನಾವಣೆ ಫಲಿತಾಂಶ ಅಂತಿಮ ಹಂತಕ್ಕೆ ಬಂದಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಅವರು ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ ಭಾರಿ ಮುನ್ನಡೆ ಸಾಧಿಸಿದ್ದು, ಗೆಲ್ಲುವ ಸನಿಹದಲ್ಲಿದ್ದಾರೆ. ಇದರ ನಡುವೆಯೇ ನಡ್ಡಾ ಅವರು ಟ್ರಂಪ್ ವಿರುದ್ಧ ಮಾತನಾಡಿದ್ದು, ಟ್ರಂಪ್ ಕೈಯಿಂದ ಕರೊನಾ ನಿರ್ವಹಣೆ ಸಾಧ್ಯವಾಗಲಿಲ್ಲ. ಆದರೆ, ಪ್ರಧಾನಿ ಮೋದಿ ಅವರು ಸರಿಯಾದ ಸಮಯಕ್ಕೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಮೂಲಕ 130 ಕೋಟಿ ಭಾರತೀಯರನ್ನು ರಕ್ಷಿಸಿದರು ಎಂದು ನಡ್ಡಾ ಹೇಳಿದರು.
ಇದನ್ನೂ ಓದಿ: ಮೋದಿ ಮತ್ತೆ ಗೆದ್ದರೂ ಪ್ರಧಾನಿಯಾಗಲ್ಲ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದೇಕೆ ?
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ನಡ್ಡಾ, ಪ್ರಧಾನಿ ಮೋದಿ ವಿರುದ್ಧ ಟೀಕಿಸುವ ಭರದಲ್ಲಿ ರಾಹುಲ್, ರಾಷ್ಟ್ರೀಯ ಹಿತಾಸಕ್ತಿಯನ್ನು ವಿರೋಧಿಸುತ್ತಾರೆ. ಅದು ಅವರ ಅರಿವಿಗೇ ಬರುವುದೇ ಇಲ್ಲ ಎಂದು ಟೀಕಿಸಿದರು. ಇದೇ ವೇಳೆ ಬಿಹಾರ ಮೈತ್ರಿಕೂಟದ ಬಗ್ಗೆ ಮಾತನಾಡಿ, ಆರ್ಜೆಡಿ ಮತ್ತು ಕಾಂಗ್ರೆಸ್ ವಿನಾಶಕಾರಿ ಚಿಂತನೆಯುಳ್ಳ ಸಿಪಿಐ(ಎಂಎಲ್) ಜತೆ ಕೈಜೋಡಿಸಿದೆ ಎಂದರು. ಇದು ಅಭ್ಯರ್ಥಿ ಪರ ಮತ ಚಲಾಯಿಸುವ ಚುನಾವಣೆಯಲ್ಲ, ಇದು ಬಿಹಾರ ಭವಿಷ್ಯ ನಿರ್ಧರಿಸುವ ಚುನಾವಣೆ ಎಂದು ನಡ್ಡಾ ಹೇಳಿದರು.
ಈಗಾಗಲೇ ಎರಡು ಹಂತದ ಮತದಾನ ಮುಗಿದಿದ್ದು, ಮೂರನೇ ಅಂತಿಮ ಹಂತದ ಮತದಾನ ನ. 7ರ ಶನಿವಾರದಂದು ನಡೆಯಲಿದೆ. ನ. 10ರಂದು ಬಿಹಾರದ ಗದ್ದುಗೆ ಯಾರು ಏರಲಿದ್ದಾರೆ ಎಂಬುದು ಗೊತ್ತಾಗಲಿದೆ. (ಏಜೆನ್ಸೀಸ್)