ಚನ್ನಗಿರಿ: ಗಾಳಿ-ಬೆಳಕು ಹಾಗೂ ಮಳೆ ಆಕರ್ಷಣೆ ಮಾಡುವ ಶಕ್ತಿ ಮರಗಳಲ್ಲಿದೆ. ಅವನ್ನು ನಾಶ ಮಾಡಿದರೆ ಮನುಕುಲಕ್ಕೆ ಕುತ್ತು ನಿಶ್ಚಿತ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎನ್. ಪ್ರದೀಪ್ ಹೇಳಿದರು.
ತಾಲೂಕಿನ ಆಕಳಕಟ್ಟೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವನ ಮಹೋತ್ಸವ ಹಾಗೂ ಉಚಿತ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿ ಸೃಷ್ಟಿಯಾದ ಕಾಲದಿಂದಲೂ ಇದ್ದ ಮನುಷ್ಯ ಮತ್ತು ಮರಗಳ ನಡುವಿನ ಸಂಬಂಧ, ನಿರಂತರ ಮರಗಳ ಕಡಿತದಿಂದಾಗಿ ಕಳಚಿದೆ. ಇದರ ಪರಿಣಾಮ ಅನಾವೃಷ್ಟಿ, ಬರಗಾಲದ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಹೆಚ್ಚುತ್ತಿರುವ ಭೂಮಿ ತಾಪಮಾನ ಕಡಿಮೆ ಮಾಡಲು ಹಸಿರನ್ನು ಹೆಚ್ಚಿಸಬೇಕಿದೆ.
ಶುದ್ಧಗಾಳಿ ಪಡೆಯಲು ಪ್ರತಿಯೊಬ್ಬರೂ ಗಿಡಮರ ನೆಟ್ಟು ಉಳಿಸಿ ಪೋಷಿಸಬೇಕು. ಅಲ್ಲದೆ ಅವನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಸ್ಥೆಯಿಂದ 5 ಸಾವಿರ ಸಸಿ ನೆಡುವ ಪ್ರಯತ್ನ ಮಾಡಲಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಬುಳಸಾಗರ ಗ್ರಾಪಂ ಅಧ್ಯಕ್ಷ ಟಿ. ಶ್ರೀನಿವಾಸ್, ತಾಲೂಕು ಹಾಲು ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಸಂಸ್ಥೆ ಯೋಜನಾಧಿಕಾರಿ ಶ್ರೀಧರ್, ಗ್ರಾಪಂ ಸದಸ್ಯ ರುದ್ರೇಶ್, ಶಿಕ್ಷಕಿ ಆಶಾ, ಕೃಷಿ ಅಧಿಕಾರಿ ಹನುಮಂತಪ್ಪ ಇದ್ದರು.