ಕುಶಾಲನಗರ: ನಗರದಲ್ಲಿ ಭಾನುವಾರ ಸಂಪೂರ್ಣವಾಗಿ ಲಾಕ್ಡೌನ್ ಆಗಿದ್ದು, ಜನ ಸಂಚಾರ ವಿರಳವಾಗಿತ್ತು.
ಮೆಡಿಕಲ್ ಸ್ಟೋರ್, ಖಾಸಗಿ ಆಸ್ಪತ್ರೆ ಮತ್ತು ಮಾಂಸದ ಅಂಗಡಿಗಳು ತೆರೆದ್ದವು. ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ಪೊಲೀಸರು ಮನೆಗಳಿಗೆ ಕಳುಹಿಸಿದರು. ಕೊಪ್ಪ ಗೇಟ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಅಂತರ ಜಿಲ್ಲಾ ಸಂಚಾರದಲ್ಲೂ ತೀವ್ರ ನಿಗವಹಿಸಲಾಗಿತ್ತು. ಚೆಕ್ಪೋಸ್ಟ್ನಲ್ಲಿ ಪೊಲೀಸ್, ಅರಣ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರು. ವೈದ್ಯಕೀಯ ಮತ್ತು ಅವಶ್ಯಕತೆ ಇರುವವರಿಗೆ ಮಾತ್ರ ಸಂಚರಿಸಲು ಅನುಕೂಲ ಮಾಡಿಕೊಡಲಾಯಿತು.
ಕಟ್ಟೆಚ್ಚರ: ಗ್ರಾಮಾಂತರ ಜನತೆ ಸಂಡೇ ಲಾಕ್ಡೌನ್ ಅನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದನ್ನು ಗಮನಿಸಿ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದರು.
ಕೂಡಿಗೆ ಗ್ರಾಮದ ಮಹೇಶ್ ಕಾಳಪ್ಪ ಎಂಬುವರ ಚಿಕ್ಕನ್ ಅಂಗಡಿಯಲ್ಲಿ ಮಾಂಸ ಖರೀದಿಸಲು ಬಂದಿದ್ದ ಗ್ರಾಹಕರಿಗೆ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ದೇವರು ಲಾಠಿ ಬೀಸಲು ಮುಂದಾದರು. ಇದೇ ವೇಳೆ ಸರ್ಕಾರವೇ ಮಾಂಸದ ಅಂಗಡಿ ತೆರೆಯಲು ಮತ್ತು ಖರೀದಿಸಲು ಅವಕಾಶ ನೀಡಿರುವಾಗ ಪೊಲೀಸರ ನಡೆಯನ್ನು ಕೆಲವರು ಪ್ರಶ್ನಿಸಿದರು. ಬಟ್ಟೆ ತೊಳೆಯಲು ನದಿಗೆ ಹೋಗುತ್ತಿದ್ದ ಮಹಿಳೆಯನ್ನು ಪೊಲೀಸರು ಮನೆಗೆ ವಾಪಸ್ ಕಳುಹಿಸಿದರು.