ಶ್ರೀನಗರ: ಭದ್ರತಾ ಪಡೆ ಯೋಧರ ಗುಂಡಿನ ದಾಳಿಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ರಿಯಾಜ್ ನಾಯ್ಕೂ ಮೂಲತಃ ಶಿಕ್ಷಕ.
ಉಗ್ರರ ಗುಂಪು ಸೇರುವ ಮೊದಲು ಆತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ತಂತ್ರಜ್ಞಾನದಲ್ಲೂ ಪರಿಣಿತಿ ಪಡೆದಿದ್ದ. ಬುದ್ಧಿವಂತನಾಗಿದ್ದ ಆತ ಖಾಸಗಿಯಾಗಿ ಟ್ಯೂಷನ್ ಕೂಡ ಮಾಡುತ್ತಿದ್ದ. ಇದರಿಂದ ಆತ ಕಣಿವೆ ರಾಜ್ಯದಲ್ಲಿ ಉತ್ತಮ ಹೆಸರು ಪಡೆದಿದ್ದ.
ಮಕ್ಕಳಿಗೆ ಪಾಠ ಹೇಳುತ್ತಿದ್ದ ಶಿಕ್ಷಕ ರಿಯಾಜ್ ಉಗ್ರರ ಸಂಪರ್ಕಕ್ಕೆ ಸಿಕ್ಕಿ ಸಂಘಟನೆಯತ್ತ ನಡೆದ. ಈತ 2010ರಲ್ಲಿ ಉಗ್ರಗಾಮಿ ಚಟುವಟಿಕೆ ಆರಂಭಿಸಿದ ಎಂಬ ಮಾಹಿತಿ ಇದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ನಾಯಕನಾಗಿ 8 ವರ್ಷಗಳ ಕಾಲ ಸಂಘಟನೆಯನ್ನು ಮುನ್ನಡೆಸಿದ್ದ. ಕಣಿವೆ ರಾಜ್ಯದ ಇತಿಹಾಸಲ್ಲಿ ಇಷ್ಟು ವರ್ಷ ಸಂಘಟನೆ ಮುನ್ನಡೆಸಿದ ಇತಿಹಾಸ ಕಡಿಮೆ.
ಇದನ್ನೂ ಓದಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಯೋಧರ ಗುಂಡಿಗೆ ಬಲಿ
2016ರ ಜನವರಿಯಲ್ಲಿ ಮೊದಲ ಬಾರಿಗೆ ಈತ ಮುನ್ನೆಲೆಗೆ ಬಂದ ಎಂಬ ಮಾಹಿತಿ ಇದೆ. 2016 ರ ಜುಲೈನಲ್ಲಿ ಕಾಶ್ಮೀರದ ಕಮಾಂಡರ್ ಬುರ್ಹಾನ್ ವಾನಿಯನ್ನು ಗುಂಡಿಕ್ಕಿ ಕೊಂದ ನಂತರ ರಿಯಾಜ್ ಭಯೋತ್ಪಾದಕ ಗುಂಪಿನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ. ನಂತರ ಕಣಿವೆ ರಾಜ್ಯದಲ್ಲಿ ಈತನ ಉಗ್ರ ಚಟುವಟಿಕೆಗಳು ತೀವ್ರವಾಗಿ ನಡೆದವು. ಕಣಿವೆ ರಾಜ್ಯದ ಉಗ್ರ ಚಟುವಟಿಕೆಗಳ ಹಿಡಿತವನ್ನು ಸಂಪೂರ್ಣವಾಗಿ ಪಡೆದ. ಹೀಗಾಗಿ ಈತನನ್ನು ಅಮೆರಿಕಾ 2017ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತು.
ಈತ ಸೇನೆಯಿಂದ ಹಲವು ಬಾರಿ ತಪ್ಪಿಸಿಕೊಂಡಿದ್ದ. ಕೊದಲೆಳೆ ಅಂತರದಲ್ಲಿ ಒಮ್ಮೆ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದ. ರಿಯಾಜ್ ಹತ್ಯೆ ಸೇನೆಯ ಒಂದು ಉತ್ತಮ ಕಾರ್ಯಾಚರಣೆ ಎಂದು ಬಿಂಬಿತವಾಗಿದೆ. (ಏಜೆನ್ಸೀಸ್)