ಅಥಣಿ ಗ್ರಾಮೀಣ: ಮಕ್ಕಳ ಅಭಿರುಚಿಗೆ ಅನುಗುಣವಾಗಿ ಉತ್ತೇಜನ ನೀಡಬೇಕು. ಪಾಲಕರು ಒತ್ತಡ ಹಾಕಿ ಮಕ್ಕಳನ್ನು ಅಣಿ ಮಾಡಬಾರದು ಎಂದು ಬೆಳಗಾವಿ ಪ್ರಾದೇಶಿಕ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ವರಿಷ್ಠಾಧಿಕಾರಿ ರವೀಂದ್ರ ಗಡಾದಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಶ್ರೀಮತಿ ಶಾಂತಾಬಾಯಿ ದೇಶಪಾಂಡೆ ಸಿಬಿಎಸ್ಸಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲಾಪರ್ವ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಸತತ ಅಧ್ಯಯನದಿಂದ ಗುರಿ ತಲುಪಲು ಸಾಧ್ಯ. ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಬೇಕು. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕರದ್ದಾಗಿದೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಕೆ. ಕಾಂಬಳೆ ಮಾತನಾಡಿ, ಗ್ರಾಮೀಣ ರೈತರ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಮತ್ತು ವಿಚಾರ ಶಕ್ತಿ ಬಲಿಷ್ಠವಾಗಿರುತ್ತದೆ. ನೈಜ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ರೇಣುಕಾ ಫೌಂಡೇಶನ್ ಶಿಕ್ಷಣ ಸಂಸ್ಥೆ ಸೃಷ್ಟಿಸಿರುವುದು ಸ್ಥಳೀಯ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಸಿಬಿಎಸ್ಸಿ ಶಾಲೆ ತೆರೆಯುವ ಮೂಲಕ ಧಾರವಾಡ, ಬೆಂಗಳೂರ ನಗರಕ್ಕೆ ಪೈಪೋಟಿ ನೀಡಿರುವುದು ಸಂತಸದ ಸಂಗತಿ ಎಂದರು.
ರೇಣುಕಾ ಸಕ್ಕರೆ ಕಾರ್ಖಾನೆ ಜಿಎಂ ಸಂಜೀವ ತೇರದಾಳ, ರಾಜಕುಮಾರ ಅಡಹಳ್ಳಿ, ಬಾಬುರಾವ ಮಲಗೌಡನವರ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರತ್ರ ನೀಡಿ ಸತ್ಕರಿಸಲಾಯಿತು.
ಪ್ರಾಚಾರ್ಯ ಅಶೋಕ ತುಪ್ಪದ, ಸಂಜು ಗೌರಗೊಂಡ, ಕಲ್ಪನಾ ನಾಗರ, ಸಚಿನ ಉಪಾಧ್ಯಾಯ, ಶಿವಾನಂದಯ್ಯ ಹಿರೇಮಠ, ಸಾಗರ ಪಾಟೀಲ, ದತ್ತಾ ಜಾಧವ, ಶಿವಲೀಲಾ ವಸದ, ನೈನಾ ನಾಯಕ, ಅಕ್ಷತಾ ಚೌಕ್, ಗೀತಾ ತೇಲಿ, ಬಾಳಾಸೋ ಜಗತಾಪ, ಸವಿತಾ ಮುನವಳ್ಳಿ ಇತರರಿದ್ದರು.