ನವದೆಹಲಿ: ಭೀತಿಯಿಂದ ದೆಹಲಿಯ ತಿಹಾರ್ ಜೈಲಿನಿಂದ 400ಕ್ಕೂ ಹೆಚ್ಚು ಕೈದಿಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.
ಕರೊನಾ ಸಾಂಕ್ರಾಮಿಕ ರೋಗದ ಭಯ ಈಗ ಎಲ್ಲೆಲ್ಲೂ ಆವರಿಸಿದೆ. ಲಾಕ್ಡೌನ್ ಆಗಿದೆ. ಜನರು ಗುಂಪುಗೂಡಲು ಅವಕಾಶ ಇಲ್ಲ. ಅದೇ ರೀತಿ ಜೈಲಿನಲ್ಲಿಯೂ ಜನದಟ್ಟಣೆ ಕಡಿಮೆ ಮಾಡುವ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಜೈಲು ಆಡಳಿತ ತಿಳಿಸಿದೆ.
ಒಟ್ಟು 419 ಕೈದಿಗಳಿಗೆ ಕರೊನಾ ನಿಮಿತ್ತ ತಾತ್ಕಾಲಿ ಬಿಡುಗಡೆ ಭಾಗ್ಯ ಸಿಕ್ಕಿದೆ. 356 ಕೈದಿಗಳಿಗೆ 45 ದಿನಗಳ ಮಧ್ಯಂತರ ಜಾಮೀನು ನೀಡಲಾಗಿದೆ. ಹಾಗೇ 63 ಮಂದಿಯನ್ನು ಎಂಟು ವಾರಗಳ ತುರ್ತು ಪೆರೋಲ್ ಆಧಾರದಲ್ಲಿ ಹೊರಗೆ ಕಳಿಸಲಾಗಿದೆ.
ಕರೊನಾ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು.ಹೀಗಾಗಿ ಶೀಘ್ರದಲ್ಲಿಯೇ ಸುಮಾರು 3000 ಕೈದಿಗಳನ್ನು ಹೊರಗೆ ಬಿಡುತ್ತೇವೆ ಎಂದು ಇತ್ತೀಚೆಗಷ್ಟೇ ಜೈಲು ಆಡಳಿತ ತಿಳಿಸಿತ್ತು. ಅದಾದ ಮೇಲೆ ಮೊದಲನೇ ಬ್ಯಾಚ್ನಲ್ಲಿ 419ಮಂದಿಯನ್ನು ತಾತ್ಕಾಲಿಕವಾಗಿ ಬಿಟ್ಟು ಕಳಿಸಿದೆ. ಹಾಗೇ ಮುಂದಿನ ದಿನಗಳಲ್ಲಿ ಇನ್ನೂ ಒಂದಷ್ಟು ಕೈದಿಗಳ ಬಿಡುಗಡೆ ಮಾಡುವುದಾಗಿ ಹಿರಿಯ ಜೈಲಾಧಿಕಾರಿ ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ 18,000 ಕೈದಿಗಳಿದ್ದಾರೆ. ಇಡೀ ದೆಹಲಿಯಲ್ಲಿ ಅತಿ ಹೆಚ್ಚು ಜನದಟ್ಟಣೆ ಇರುವ ಜೈಲು ಇದು ಅದು 10,000 ಕೈದಿಗಳ ಸಾಮರ್ಥ್ಯವಿರುವ ಕಾರಾಗೃಹವಾದರೂ ಹೆಚ್ಚುವರಿ 8000 ಮಂದಿ ಇದ್ದಾರೆ.
ಹೀಗೆ ಕೈದಿಗಳನ್ನು ಬಿಡುಗಡೆ ಮಾಡುವಾಗ ಒಂದಷ್ಟು ಪ್ರಮುಖ ಅಂಶಗಳನ್ನು ಪರಿಗಣಿಸಲಾಗಿದೆ. ಜೈಲಿನಲ್ಲಿ ಅವರ ನಡತೆ ಹೇಗಿತ್ತು ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ದೊಡ್ಡ ಅಪರಾಧಗಳನ್ನು ಮಾಡದೆ, 7 ವರ್ಷಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಯಲ್ಲಿರುವವರನ್ನೇ ಸದ್ಯ ಹೊರಗೆ ಕಳಿಸಲಾಗಿದೆ ಎಂದು ದೆಹಲಿ ಕಾರಾಗೃಹಗಳ ಡೈರೆಕ್ಟರ್ ಜನರಲ್ ಸಂದೀಪ್ ಗೋಯೆಲ್ ತಿಳಿಸಿದ್ದಾರೆ. (ಏಜೆನ್ಸೀಸ್)