ಬೆಂಗಳೂರು: ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಧರಿಸಿದ್ದ ಬಿಗ್ಬಾಸ್ ಸ್ಪರ್ಧಿ ವರ್ತೂರು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿಯಲ್ಲಿ ಬಂಧನವಾಗಿದೆ. ವಿಚಾರಣೆ ನಡೆಸಿದ ಎಸಿಜೆಎಂ ನ್ಯಾಯಧೀಶರು ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೀಗ ಸಂತೋಷ್ಗೆ ಜೈಲಿನಲ್ಲಿ ಕೈದಿ ನಂಬರ್ ಕೂಡಾ ನೀಡಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವರ್ತೂರು ಸಂತೋಷ್ ಅವರನ್ನು ಇಡಲಾಗಿದೆ. ಸದ್ಯ ಅವರಿಗೆ ಕೈದಿ ಸಂಖ್ಯೆ ನೀಡಲಾಗಿದೆ. ಕಾರಾಗೃಹ ಅಧಿಕಾರಿಗಳು ವಿಚಾರಣಾಧೀನ ಕೈದಿ ಸಂಖ್ಯೆ 10935 ಎಂಬ ನಂಬರ್ನ್ನು ಸಂತೋಷ್ಗೆ ನೀಡಿದ್ದಾರೆ.
ಬಿಗ್ ಬಾಸ್ ಮನೆಗೆ ಹೋಗುವ ಸಂದರ್ಭದಲ್ಲಿ ಸಂತೋಷ್ ಕತ್ತಿಗೆ ಲಾಕೆಟ್ ಒಂದನ್ನು ಹಾಕಿದ್ದರು. ಇದು ಹುಲಿಯ ಉಗುರಿನಿಂದ ಮಾಡಲ್ಪಟ್ಟಿತ್ತು. ಈ ಸಂಬಂಧ ಕೇಸ್ ದಾಖಲಿಸಲಾಯಿತು. ಕನ್ಫೆಷನ್ ರೂಂಗೆ ಬರುವಂತೆ ಸಂತೋಷ್ಗೆ ಸೂಚಿಸಲಾಯಿತು. ಅವರನ್ನು ಬಿಗ್ ಬಾಸ್ ಮನೆ ಹೊರಗೆ ಕರೆತಂದ ಬಳಿಕ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದರು.
ಹಬ್ಬದ ಹಿನ್ನೆಲೆ ಎರಡು ದಿನ ಕೋರ್ಟ್ ರಜೆ ಇದ್ದ ಕಾರಣ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೊಯ್ದು ಸಂತೋಷ್ರನ್ನು ಹಾಜರು ಪಡಿಸಲಾಯ್ತು. ವಿಚಾರಣೆ ನಡೆಸಿದ ಎಸಿಜೆಎಂ ನ್ಯಾಯಧೀಶರು ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರಿಗೆ ಸಂಕಷ್ಟ ಎದುರಾಗಿದೆ. ಹೌದು, ಸಂತೋಷ್ ಆಪ್ತ ರಂಜಿತ್ ಹಾಗೂ ಚಿನ್ನದಂಗಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ: ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು, ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ.
ಹುಲಿ ಉಗುರು ಪ್ರಕರಣ: ನಟ ದರ್ಶನ್, ವಿನಯ್ ಗುರೂಜಿ ವಿರುದ್ಧ ದೂರು ದಾಖಲು