ತಿರುವನಂತಪುರ: ಕೇರಳದ ತ್ರಿಶೂರ್ನಲ್ಲಿ ಪತ್ತೆಯಾದ ರಾಷ್ಟ್ರದ ಮೊದಲ ಕೊರೊನಾ ವೈರಸ್ ಪೀಡಿತ ಮಹಿಳೆ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿದೆ.
ಚೀನಾದ ವುಹಾನ್ನ ವೈದ್ಯಕೀಯ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ ರಾಷ್ಟ್ರಕ್ಕೆ ಮರಳಿದ್ದರು. ದೆಹಲಿಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗಿ ನಂತರ ತ್ರಿಶೂರ್ಗೆ ತೆರಳಿದ್ದರು. ತಪಾಸಣೆ ವರದಿಯಲ್ಲಿ ಆಕೆಗೆ ವೈರಸ್ ಹರಡಿರುವುದು ದೃಢಪಟ್ಟಿತು. ಕೂಡಲೇ ಕೇಂದ್ರ ಸರ್ಕಾರ, ಕೇರಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿತು.
ಮಹಿಳೆಗೆ ವೈರಸ್ ಹರಡಿರುವ ಪ್ರಕರಣ ಪರಿಶೀಲನೆಗೆ ಕೇರಳ ಸರ್ಕಾರ ಮೈದ್ಯಕೀಯ ಮಂಡಳಿ ರಚನೆ ಮಾಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.
ವೈರಸ್ ಪೀಡಿತೆಯ ಸ್ಥಿತಿ ಸ್ಥಿರವಾಗಿದೆ. ಚಿಕಿತ್ಸೆಗೆ ಆಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾಳೆ. ವೈದ್ಯಕೀಯ ಮಂಡಳಿ ರಚಿಸಲಾಗಿದ್ದು, ಪ್ರತಿದಿನ ಸಂಜೆ ಬುಲೆಟಿನ್ ನೀಡಲಾಗುವುದು ಎಂದು ಅವರು ಹೇಳಿದರು.
ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರ ವದಂತಿ ಹರಡಬಾರದು ಹಾಗೂ ವದಂತಿ ನಂಬಬಾರದು. ಈ ಬಿಕ್ಕಟ್ಟು ಎದುರಿಸಲು ಸಾರ್ವಜನಿಕರು, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರ ತಂಡ ಕೈಜೋಡಿಸಬೇಕು ಎಂದು ಅವರು ಸಹಕಾರ ಕೋರಿದರು.
ವೈರಸ್ಗೆ ತುತ್ತಾಗಿರುವ ರೋಗಿಯ ಸಂಪರ್ಕಕ್ಕೆ ಬಂದವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆಗೆ ಒಳಗಾದವರಲ್ಲಿ ಬಹುತೇಕ ಮಂದಿಗೆ ವೈರಸ್ ಹರಡಿಲ್ಲ.ಅವರನ್ನು ಮನೆಗೆ ಕಳುಹಿಸಲಾಗಿದೆ. ಉಸಿರಾಟ ತೊಂದರೆ ಹಾಗೂ ಗಂಟಲು ನೋವು ಇರುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮೊದಲ ರೋಗಿಯ ಜೊತೆ ನೇರವಾಗಿ ಸಂಪರ್ಕಕ್ಕೆ ಬಂದವರ ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಇದರಲ್ಲಿ ಇನ್ನು ಮೂವರ ವರದಿ ಬರಬೇಕಾಗಿದೆ ಎಂದು ಸಚಿವರು ಮಾಹಿತಿ ನೀಡಿದರು(ಏಜೆನ್ಸೀಸ್)