ಬೆಂಗಳೂರು: ಅಬ್ದುಲ್ ಕರೀಂಲಾಲಾ ತೆಲಗಿ ಯಾರಿಗೆ ಗೊತ್ತಿಲ್ಲ? ದಶಕಗಳ ಹಿಂದೆ ಬಯಲಾದ ಆತನ ನಕಲಿ ಛಾಪಾ ಕಾಗದ ಹಗರಣ ದೇಶಾದ್ಯಂತ ಸುದ್ದಿಯಾಗಿತ್ತು, ಸರ್ಕಾರಗಳನ್ನೇ ನಡುಗಿಸಿತ್ತು. ಆತನ ಮಾದರಿಯಲ್ಲೇ ಹಸೈನ್ ಮೋದಿ ಬಾಬು ಎಂಬಾತ ನಕಲಿ ಛಾಪಾ ಕಾಗದಗಳನ್ನು ತಯಾರಿಸುತ್ತಿದ್ದುದರಿಂದ ಆತನನ್ನು ಛೋಟಾ ತೆಲಗಿ ಎಂದೇ ಎಲ್ಲರೂ ಕರೆಯುತ್ತಿದ್ದರು. ಅವನೀಗ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ.
ಕೇವಲ 7ನೇ ತರಗತಿ ಕಲಿತಿರುವ ಆತ 20 ವರ್ಷಗಳಿಂದ ವಿವೇಕ್ನಗರದಲ್ಲಿ ನೆಲೆಸಿದ್ದ. ಕಂದಾಯ ಭವನದ ಬಳಿ ಹಾಗೂ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಬಾಡಿಗೆ ಕರಾರು ಪತ್ರ ಹಾಗೂ ಭೋಗ್ಯದ ಕರಾರು ಪತ್ರಗಳನ್ನು ಮಾಡಿಸಿಕೊಡುವ ಬ್ರೋಕರ್ ಕೆಲಸ ಮಾಡುತ್ತಿದ್ದ. ಕಾಲ ಕ್ರಮೇಣ ಹಲವಾರು ವರ್ಷಗಳಿಂದ ನಕಲಿ ಛಾಪಾ ಕಾಗದಗಳನ್ನು ತಯಾರಿಸುವುದು ಹಾಗೂ ಡಾಕ್ಯೂಮೆಂಟ್ ಶೀಟ್ಗಳಿಗೆ ಪ್ರಾಂಕಿಂಗ್ ಅಥವಾ ಎಂಬೋಸಿಂಗ್ನ್ನು ನಕಲಿಯಾಗಿ ತಯಾರಿಸುವ ಕೆಲಸಕ್ಕೆ ಕೈ ಹಾಕಿದ್ದ. ಹಸೈನ್ ಮತ್ತು ಹರೀಶ ಇಬ್ಬರನ್ನು 2013ರಲ್ಲಿ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಆತನ ಜತೆ ಬಂಧಿತನಾಗಿರುವ ಇನ್ನೊಬ್ಬ ಆರೋಪಿ ಹರೀಶ ಎಂಬಾತ ಬಿ.ಎ. ಪದವೀಧರ. ವೃತ್ತಿಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಟೈಪಿಂಗ್ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಬಂಧಿತೆ ಶವರ್ ಸೀಮಾ ಬಿಕಾಂ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ 16 ವರ್ಷಗಳಿಂದ ಕಂದಾಯ ಭವನದ ಬಳಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದಳು. ಮಗದೊಬ್ಬ ಬಂಧಿತೆ ನಜ್ಮಾ ಫಾತಿಮಾ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, 13 ವರ್ಷಗಳ ಹಿಂದಿನಿಂದ ಕಂದಾಯ ಭವನದ ಬಳಿ ಬಾಡಿಗೆ ಕರಾರು, ಭೋಗ್ಯದ ಕರಾರು ಮತ್ತು ಇತರೆ ದಾಖಲಾತಿಗಳಿಗೆ ನೋಟರಿ ಮಾಡಿಸಿಕೊಡುವ ಬ್ರೋಕರ್ ಕೆಲಸ ಮಾಡಿಕೊಂಡಿದ್ದಳು. ಈ ಮೂವರಿಗೂ ಹಸೈನ್ ಒಂದು ರೀತಿಯಲ್ಲಿ ಗುರುವಿದ್ದಂತೆ. ಆತನ ಬಳಿ ನಕಲಿ ಛಾಪಾ ಕಾಗದಗಳು ಮತ್ತು ಪ್ರಾಂಕಿಂಗ್/ಎಂಬೋಸಿಂಗ್ ಮಾಡಿರುವ ಡಾಕ್ಯುಮೆಂಟ್ ಶೀಟ್ಗಳನ್ನು ಇವರು ಖರೀದಿ ಮಾಡುತ್ತಿದ್ದರು. ಯಾರಿಗೂ ಗೊತ್ತಾಗದಂತೆ ಅವುಗಳನ್ನು ಹೇಗೆ ಜನರಿಗೆ ಮಾರಾಟ ಮಾಡಬೇಕೆಂಬುದನ್ನು ಹೇಳಿಕೊಟ್ಟಿದ್ದ. ಆ ಮೂಲಕ ಅವರೆಲ್ಲರೂ ಲಕ್ಷಾಂತರ ರೂ. ಸಂಪಾದಿಸಿದ್ದರು ಎನ್ನುತ್ತಾರೆ ಪೊಲೀಸರು.