ಯಶೋಧರ ವಿ.ಬಂಗೇರ ಮೂಡುಬಿದಿರೆ
ಲೀಫ್ ಆರ್ಟ್ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದ ಮೂಡುಬಿದಿರೆಯ ಚಿತ್ರ ಕಲಾವಿದ, ಆಳ್ವಾಸ್ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿ ತಿಲಕ್ ಕುಲಾಲ್ ಒಂದು ತಿಂಗಳಿನಿಂದ ವಿಭಿನ್ನ ರೀತಿಯ ಚಿತ್ರ ಬಿಡಿಸುವಲ್ಲಿ ನಿರತರಾಗಿದ್ದಾರೆ. ಮೊಳೆಗಳನ್ನು ಜೋಡಿಸಿ ಚಿತ್ರ ಬಿಡಿಸುವ ಮೂಲಕ ಕೈಚಳಕ ತೋರಿಸಿದ್ದಾರೆ.
ಲೀಫ್ ಆರ್ಟ್, ಮಣ್ಣಿನ ಪ್ರತಿಮೆ, ಫೈಬರ್ ಪ್ರತಿಮೆ, ಪೆನ್ಸಿಲ್ ಆರ್ಟ್ ಸಹಿತ ಹಲವು ಮಾದರಿಯಲ್ಲಿ ಚಿತ್ರ ಬಿಡಿಸುವಲ್ಲಿ ನಿಪುಣರಾಗಿರುವ ತಿಲಕ್, ಹೊಸತನದೊಂದಿಗೆ ಮೊಳೆಗಳನ್ನು ಜೋಡಿಸಿ ಕಲಾಕೃತಿ ಮಾಡುವ ಚಿಂತನೆ ಮಾಡಿದ್ದು, ಎಂಟೇ ದಿನದಲ್ಲಿ ಗಣಪತಿಯ ಕಲಾಕೃತಿ ಮಾಡಿದ್ದಾರೆ. ಬರೋಬ್ಬರಿ 14,450 ಮೊಳೆಗಳನ್ನು ಜೋಡಿಸಿ 4/2 ಫೀಟ್ ಫ್ಲೈವುಡ್ ಮೇಲೆ ಗಣಪತಿ ಚಿತ್ರ ಬಿಡಿಸಿದ್ದಾರೆ. ಮೊದಲು ಮೊಳೆಯೊಂದರಿಂದ ಗಣಪತಿಯ ಚಿತ್ರ ಬಿಡಿಸಿದ್ದು, ಬಳಿಕ ಮೊಳೆಗಳನ್ನು ಜೋಡಿಸಿ ಕಲಾಕೃತಿ ಚಿತ್ರ ಪೂರ್ಣಗೊಳಿಸಿದ್ದಾರೆ. ಇಡೀ ಚಿತ್ರವನ್ನು ಬ್ರಷ್, ಬಣ್ಣ ಉಪಯೋಗಿಸದೇ ಮಾಡಿರುವುದು ವಿಶೇಷ. ಕಲಾವಿದನ ಸಹಿ ಕೂಡ ಮೊಳೆಗಳನ್ನೇ ಜೋಡಿಸಿ ಮಾಡಲಾಗಿದೆ.
ಲೀಫ್ ಆರ್ಟ್ನಲ್ಲಿ ಪ್ರಸಿದ್ಧಿ: ತಿಲಕ್ ಒಂದು ವರ್ಷದಿಂದ ಲೀಫ್ ಆರ್ಟ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದವರು. ಮಾಜಿ ಸಿಎಂ ಬಿಎಸ್ವೈ, ಅವರ ಪುತ್ರ ವಿಜಯೇಂದ್ರ, ಮಾಜಿ ಸಚಿವ ಸಿ.ಟಿ.ರವಿ, ಆನಂದ್ ಗುರೂಜಿ ಸಹಿತ ಹಲವು ಪ್ರಮುಖರ ಭಾವಚಿತ್ರಗಳನ್ನು ಮಾಡಿರುವುದಲ್ಲದೆ ಪೊಳಲಿ ಶ್ರೀ ರಾಜರಾಜೇಶ್ವರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಚಿತ್ರಗಳೂ ತಿಲಕ್ ಕೈಚಳಕದಲ್ಲಿ ಎಲೆಯ ಮೇಲೆ ಮೂಡಿದೆ. ಟ್ಯಾಬ್ಲೊಗಳಿಗೆ ಬೃಹತ್ ಆಕಾರದ ವಿವಿಧ ಕಲಾಕೃತಿಗಳನ್ನು ಕೂಡ ತಿಲಕ್ ರಚಿಸಿಕೊಟ್ಟಿದ್ದಾರೆ.
ಹೊಸ ಮಾದರಿಯಲ್ಲಿ ಚಿತ್ರ ಬಿಡಿಸಬೇಕೆಂಬ ಚಿಂತನೆ ಮಾಡಿದಾಗ ಮೊಳೆಗಳಲ್ಲಿ ಕಲಾಕೃತಿ ಮಾಡುವ ಬಗ್ಗೆ ಹೊಳೆಯಿತು. ಮುಂದೆ ಭಾವಚಿತ್ರಗಳನ್ನು ಇದೇ ಮಾದರಿಯಲ್ಲಿ ಮಾಡುವ ಚಿಂತನೆ ಮಾಡುತ್ತಿದ್ದೇನೆ.
ತಿಲಕ್ ಕುಲಾಲ್, ಚಿತ್ರ ಕಲಾವಿದ, ಮೂಡುಬಿದಿರೆ