ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಡಿಪಲ್ಲಿ ಸಮೀಪ ರಕ್ತ ಚಂದನ ಕಳವು ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಹೋಗುತ್ತಿದ್ದ ಕಳ್ಳರನ್ನು ನಂಗಲಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಆಂಧಪ್ರದೇಶದ ಚಿತ್ತೂರು ಜಿಲ್ಲೆ ಜಾನಕಾರಿಪಲ್ಲಿ ಗ್ರಾಮದ ಇಮ್ರಾನ್ ಮತ್ತು ವಹಾಬ್ ಬಂಧಿತರಾಗಿದ್ದು, ₹35 ಲಕ್ಷ ರೂ. ಬೆಲೆ ಬಾಳುವ 750 ಕೆಜಿ ತೂಕದ 31 ರಕ್ತ ಚಂದನ ತುಂಡುಗಳನ್ನು ಆಂಧ್ರದ ಅರಣ್ಯ ಪ್ರದೇಶದಲ್ಲಿ ಕಳ್ಳತನ ಮಾಡಿಕೊಂಡು ರಾಮಸಮುದ್ರಂ ಮತ್ತು ಪುಂಗನೂರು ರಸ್ತೆ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡಲು ಹೋಗುತ್ತಿದ್ದಾಗ ಪೊಲೀಸರ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಕಳ್ಳರು ಬೊಲೆರೋ ಪಿಕಪ್ ವಾಹನದ ಕ್ಯಾಬಿನ್ನಲ್ಲಿ ಮರದ ಹಲಗೆಗಳಿಂದ ಬೀಡಿಂಗ್ ಕಟ್ಟಿ ಯಾರಿಗೂ ಕಾಣದಂತೆ ರಕ್ತಚಂದನ ತುಂಡುಗಳನ್ನು ಜೋಡಿಸಿ ಅದರ ಮೇಲೆ ಟೊಮೆಟೊ ಬಾಕ್ಸ್ ಇಟ್ಟು ಅನುಮಾನ ಬಾರದ ರೀತಿಯಲ್ಲಿ ಸಾಗಿಸುತ್ತಿದ್ದರು.
ರಕ್ತಚಂದನ ಸಾಗಿಸುತ್ತಿದ್ದ ಕಾರಿನ ಹಿಂದೆ, ಮುಂದೆ ಮತ್ತೆರಡು ಕಾರುಗಳು ಬರುತ್ತಿದ್ದಾಗ ಅನುಮಾನಗೊಂಡ ಪೊಲೀಸರು ವಾಹನಗಳ್ಳನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.
ತಮಿಳುನಾಡಿನ ಪುನ್ನಮಲ್ಲಿ ರಮೇಶ್, ಅರುಣ್, ಆಂಧ್ರಪ್ರದೇಶದ ರಾಮಕುಪ್ಪಂನ ಅರಣ್ಯ ಸಿಬ್ಬಂದಿ ಬಾಬು ಎಂಬುವರು ಪರಾರಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾರ್ಗದರ್ಶನ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಸತೀಶ್ ಸೂಚನೆಯಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.