More

    ನಕಲಿ ಜಾತಿ ಪ್ರಮಾಣಪತ್ರದ ಪ್ರಯೋಜನ ಪ್ರಶ್ನಿಸಲು ಕಾಲಮಿತಿ ಇಲ್ಲ

    ಬೆಂಗಳೂರು: ನಕಲಿ ಜಾತಿ ಪ್ರಮಾಣಪತ್ರದಿಂದ ಪಡೆದಿರುವ ಪ್ರಯೋಜನಗಳನ್ನು ಪ್ರಶ್ನಿಸಲು ಕಾಲಮಿತಿ ನಿಗದಿಪಡಿಸುವ ಪ್ರಮೇಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.


    ನಕಲಿ ಜಾತಿ ಪ್ರಮಾಣಪತ್ರ ಪಡೆದು ಆಯುಷ್ ವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ಡಾ.ಗುಡ್ಡದೇವ್ ಗೊಲ್ಲಪ್ಪ ಯಡ್ರಾಮಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಆಲಿಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.


    ಅರ್ಜಿದಾರರು, ತಮ್ಮ ಜಾತಿ ಪ್ರಮಾಣಪತ್ರ ರದ್ದುಗೊಳಿಸಿರುವ ಆದೇಶವನ್ನು ಅನೂರ್ಜಿತಗೊಳಿಸಬೇಕು ಮತ್ತು ತಮ್ಮನ್ನು ಪುನಃ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ವಿಜಯಪುರದಲ್ಲಿ ಕಾಲೇಜಿಗೆ ಸೇರುವಾಗ ಭರ್ತಿ ಮಾಡಿದ್ದ ನಮೂನೆಯಲ್ಲಿ ತಾನು ಹಿಂದು (ಕುರುಬ), ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ.

    ಆದರೆ ಉದ್ಯೋಗದ ವೇಳೆಗೆ ಹೇಗೆ ಗೊಂಡ ಜಾತಿಗೆ ಸೇರಿದವರಾಗಿ ಪರಿಶಿಷ್ಟ ಪಂಗಡದವರಾಗಿ ಬದಲಾಗಲು ಸಾಧ್ಯ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಅರ್ಜಿದಾರರು ನಿಜವಾಗಿಯೂ ತಮ್ಮ ಪರ ಆದೇಶ ಪಡೆಯಲು ಹಲವು ಸಂಗತಿಗಳನ್ನು ಮುಚ್ಚಿಟ್ಟಿದ್ದಾರೆಂದು ಪೀಠ ಅಸಮಾಧಾನ ಹೊರಹಾಕಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಹೇಳಿದೆ.


    ಅರ್ಜಿದಾರರು, ಕಲಬುರಗಿ ಜಿಲ್ಲೆಯಲ್ಲಿ ಕುರುಬ ಮತ್ತು ಗೊಂಡ ಸಮುದಾಯ ಒಂದೇ ಎಂದು ಕರೆಯಲಾಗುತ್ತಿದೆ. 1993ರಲ್ಲಿ ಎರಡೂ ಒಂದೇ ಸಮುದಾಯಗಳೆಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. 1997ರಲ್ಲಿ ಸರ್ಕಾರ ಜಿಲ್ಲೆಯ ಗೊಂಡ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ವಾದಿಸಿದ್ದರು.

    ಆದರೆ ಅದನ್ನು ಅಲ್ಲಗೆಳೆದ ಸರ್ಕಾರದ ಪರ ವಿಶೇಷ ವಕೀಲ ಸಿ.ಜಗದೀಶ್, ಈ ವಿಷಯಕ್ಕೆ ಸಂಬಂಧಿಸಿದಂತೆ 1986ರ ಆದೇಶವನ್ನು ಹಲವು ಪೀಠಗಳಲ್ಲಿ ಪ್ರಶ್ನಿಸಲಾಗಿದೆ. ಆ ಆದೇಶದ ಲಾಭ ಪಡೆಯಲು ಸಾಧ್ಯವಿಲ್ಲ. ಗೊಂಡ ಮತ್ತು ಕುರುಬ ಬೇರೆ ಬೇರೆ ಜಾತಿಗಳು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts