ನವದೆಹಲಿ: ರಾಜ್ಯದ ಈಶಾನ್ಯ ಭಾಗದಲ್ಲಿ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಯ ಕಿಚ್ಚು ಹತ್ತಿದ್ದು ಹಿಂಸಾಚಾರ ಹೆಚ್ಚಿದೆ. ಆದರೆ ಇದರಿಂದಾಗಿ ಜನರು ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇಲ್ಲ, ನಮ್ಮಲ್ಲಿ ಸಾಕಷ್ಟು ಭದ್ರತಾ ಪಡೆ ಇದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಚಳವಳಿಯಿಂದಾಗಿ 20 ಜನರು ಸಾವನ್ನಪ್ಪಿದ್ದರೆ. 150ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದಾರೆ. ದೆಹಲಿ ಪೊಲೀಸರ ನಿಷ್ಕ್ರಿಯತೆ ಮತ್ತು ಅಸಮರ್ಪಕ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದ ಕಾರಣದಿಂದಾಗಿಯೇ ಇಂತಹ ದುರ್ಘಟನೆ ನಡೆದಿದೆ ಎಂದು ಅನೇಕರು ಆರೋಪಿಸಿದ್ದರು. ಇದಕ್ಕೆ ಉತ್ತರಿಸಿರುವ ಅಜಿತ್ ದೋವಲ್, “ನಮ್ಮಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿಗಳಿದ್ದಾರೆ. ದೆಹಲಿ ಪೊಲೀಸರ ಸಾಮರ್ಥ್ಯ ಮತ್ತು ಉದ್ದೇಶವನ್ನು ಜನರು ಅನುಮಾನಿಸುತ್ತಿದ್ದಾರೆ. ಜನರು ಸಮವಸ್ತ್ರದಲ್ಲಿರುವ ಪೊಲೀಸರನ್ನು ನಂಬುವ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಗಲಭೆ ನಡೆದಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಜಿತ್ ದೋವಲ್, ಎಲ್ಲಾ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೆಹಲಿಯ ಬೀದಿಗಳಲ್ಲಿ ಯಾರೂ ಬಂದೂಕುಗಳನ್ನು ಹಿಡಿದು ತಿರುಗಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)