ಧಾರವಾಡ: ಬೆಂಬಲ ಬೆಲೆಯಡಿ ಹಿಂಗಾರು ಬೆಳೆಯಾದ ಕಡಲೆ ಬೆಳೆ ಖರೀದಿ ಕೇಂದ್ರಗಳನ್ನು ಆರಂಭಿಸಲು ಆಗ್ರಹಿಸಿ ನವಲಗುಂದ ತಾಲೂಕಿನ ತಿರ್ಲಾಪುರದ ರೈತ ಸೇನಾ ಕರ್ನಾಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಾಗಿದ್ದರಿಂದ ಕಡಲೆ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ರೈತರ ಕೈ ಸೇರಿಲ್ಲ. ರೈತರು ಬಂದಷ್ಟು ಬೆಳೆಯನ್ನು ಒಕ್ಕಣೆ ಮಾಡಿದ್ದಾರೆ. ರೈತರ ಅನುಕೂಲಕ್ಕಾಗಿ ಕೂಡಲೇ ಎಪಿಎಂಸಿಗಳಲ್ಲಿ ಬೆಂಬಲ ಬೆಲೆಯಡಿ ಕಡಲೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಪ್ರತಿ ಕ್ವಿಂಟಾಲ್ಗೆ 8,000 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಖಾತೆವಾರು ನಿಗದಿಪಡಿಸದೆ, ರೈತರು ತಂದಷ್ಟು ಕಡಲೆಯನ್ನು ಖರೀದಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಪರಿಹಾರ ವಿತರಿಸಲು ಆಗ್ರಹ: ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ವಿಮಾ ಕಂಪನಿಗಳು ಬೆಳೆವಿಮೆ ಪರಿಹಾರ ವಿತರಿಸಬೇಕು ಎಂದು ಇದೇವೇಳೆ ರೈತರು ಆಗ್ರಹಿಸಿದರು. ಜೊತೆಗೆ ಮುಂಗಾರು ಹಾಗೂ ಅಕಾಲಿಕ ಮಳೆಯಿಂದಾದ ಹಾನಿ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ವಿನಂತಿಸಿದರು.
ಗುರು ರಾಯನಗೌಡರ, ಮಲ್ಲಣ್ಣ ಆಲೇಕರ, ಬಸವರಾಜ ಗುಡಿ, ಮಹೇಶ ನಾವಳ್ಳಿ, ಮೆಹಬೂಬಸಾಬ ತಹಸೀಲ್ದಾರ್, ದಸ್ತಗೀರಸಾಬ ನಾಯ್ಕರ್, ಇತರರಿದ್ದರು.