ಮಡಿಕೇರಿ: ಕೂರ್ಗ್ ಕಾಫಿವುಡ್ ಮೂವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ಮಾಣ-ನಿರ್ದೇಶನದ ಕೊಡವ ಚಲನಚಿತ್ರ ಕಾಂಗತ ಮೂಡ್ ಚಿತ್ರದ ಮುಹೂರ್ತ ಮೂರ್ನಾಡಿನ ಬಿದ್ದಂಡ ಪೊನ್ನಪ್ಪರವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ ಮಾತನಾಡಿ, ನಾವು ಎಷ್ಟು ಓದುತ್ತೇವೆ ಎಂಬುದು ಮುಖ್ಯವಲ್ಲ. ನಾವು ಜೀವನದಲ್ಲಿ ಎಷ್ಟರ ಮಟ್ಟಿಗೆ ಮನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುತ್ತಿದ್ದೇವೆ ಎಂಬುದು ಮುಖ್ಯ ಗ್ರಂಥಾಲಯಕ್ಕೆ ಎಲ್ಲರೂ ಹೋಗುತ್ತಾರೆ. ಅಲ್ಲಿರುವ ಪ್ರತಿ ಪುಸ್ತಕಗಳನ್ನು ಓದುತ್ತಾರೆ. ಆದರೆ ಅದನ್ನು ಓದುವಿಕೆಗೆ ಅಷ್ಟೇ ಸೀಮಿತ ಪಡಿಸದೇ ಅದರಿಂದ ಪಡೆದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿಕೊಳ್ಳಬೇಕು ಎಂದು ಹೇಳಿದರು.
ಬಾಹ್ಯಕ್ಕಿಂತಲೂ ಅಂತರಾಳದಲ್ಲಿ ನೋಡುವ ದೃಷ್ಠಿಕೋನ ಬಾಳನ್ನು ಅಭ್ಯಾಸ ಮಾಡುತ್ತದೆ. ನಮ್ಮ ಒಳಗಿನ ಬಾಳನ್ನು ನಮ್ಮ ಮನಸ್ಸನ್ನು ನಾವು ಓಡಾಡುವ ನೆಲ, ಜಲ ಹಾಗೂ ಪರಿಸರವನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕ ಎಂದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ವರ್ಷಕ್ಕೊಂದು ಕೊಡವ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಚಿತ್ರತಂಡಕ್ಕೆ ಕೊಡವಾಭಿಮಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಸಿನಿಮಾ ನಿರ್ಮಿಸುವುದಾಗಿ ತಿಳಿಸಿದರು.
ಹಿರಿಯ ಕಲಾವಿದ ವಾಂಚೀರ ವಿಠಲ್ ನಾಣಯ್ಯ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು. ಕಾಫಿ ಬೆಳೆಗಾರ ಬಿದ್ದಂಡ ಪೊನ್ನಪ್ಪ ಕ್ಯಾಮರ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭ ಚೌರೀರ ಉದಯ ಹಾಗೂ ಪತ್ನಿ ಚೌರೀರ ರತಿರವರ ಗದ್ದೆಯಲ್ಲಿ ಎಡ್ಮ್ಯಾರ್-೧ ಆಚರಣೆ ಮಾಡುವ ದೃಶ್ಯವನ್ನು ಚಿತ್ರಿಸಲಾಯಿತು.
ಉದ್ಯಮಿ ಹಾಗೂ ಸಮಾಜ ಸೇವಕ, ಕಾಫಿ ಬೆಳೆಗಾರ ಬಡುವಂಡ ಅರುಣ್ ಹಾಗೂ ಕನ್ನು ದಂಪತಿ ಕ್ಯಾಮರಕ್ಕೆ ಪೂಜೆ ಸಲ್ಲಿಸಿ, ಚಿತ್ರದ ಯಶಸ್ಸಿಗೆ ಶುಭಹಾರೈಸಿದರು. ಚಿತ್ರದ ನಾಯಕ ಸಂತೋಷ್ ಮೇದಪ್ಪ, ನಾಯಕಿ ಅಪ್ಪಡೇರಂಡ ತೇಜು ಪೊನ್ನಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಟ್ಟುಕತ್ತೀರಾ ಯಶೋಧ ಪ್ರಕಾಶ್, ಈರಮಂಡ ವಿಜಯ್ ಉತ್ತಯ್ಯ, ಕೊಡವ ಕ್ಲಾನ್ನ ಗುಮ್ಮಟ್ಟಿರ ಕಿಸು ಉತ್ತಪ್ಪ ಹಾಗೂ ಇತರರು ಹಾಜರಿದ್ದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಹಾಗೂ ನಟ ಬೊಳ್ಳಜಿರ ಬಿ.ಅಯ್ಯಪ್ಪ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.