ಸಿದ್ದಾಪುರ: ಮಹಿಳೆಯ ಅಶ್ಲೀಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಅಪರಾಧಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಪೊನ್ನಂಪೇಟೆ ಕೃಷ್ಣ ಕಾಲನಿ ನಿವಾಸಿ ಸುರೇಶ(50) ಶಿಕ್ಷೆಗೆ ಗುರಿಯಾದವ. ಜಾಲತಾಣಗಳಲ್ಲಿ ಮಹಿಳೆಯ ಅಶ್ಲೀಲ ಭಾವಚಿತ್ರಗಳನ್ನು ಹರಿಬಿಟ್ಟ ಆರೋಪದ ಹಿನ್ನೆಲೆಯಲ್ಲಿ ಈತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಟಿ ಮತ್ತು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ 2020ರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಪೊಲೀಸರು 2021 ಸೆ.8ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮಡಿಕೇರಿ ಉಪವಿಭಾಗ ಡಿಎಸ್ಪಿ ಗಜೇಂದ್ರ ಪ್ರಸಾದ್ ತನಿಖೆ ನಡೆಸಿ ಸುರೇಶನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಧೀಶರು ಬುಧವಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಎನ್.ಪಿ.ದೇವೇಂದ್ರ ವಾದ ಮಂಡಿಸಿದ್ದರು.